ಭಾರತದಲ್ಲಿ ಅಕ್ಟೋಬರ್ 5ರಿಂದ ಪ್ರಾರಂಭವಾಗಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲಾ ಹತ್ತು ತಂಡಗಳ ನಾಯಕರು ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ತಲುಪಿದ್ದಾರೆ.
ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಐಸಿಸಿ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಭಾರತ ಮಾತ್ರವಲ್ಲದೆ, ಜಗತ್ತಿನಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಇದೇ ವೇಳೆ ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ಗೆ ಟಿಕೆಟ್ಗಳನ್ನು ಕೇಳಬೇಡಿ ಎಂದು ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಆತ್ಮೀಯ ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯ ಅವಧಿಯಲ್ಲಿ ವಿರಾಟ್ ಕೊಹ್ಲಿ ಖಂಡಿತವಾಗಿಯೂ ಯಾವುದೇ ಗೊಂದಲವನ್ನು ಬಯಸುವುದಿಲ್ಲ. ಹೀಗಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದು, ಅಲ್ಲಿ ಅವರು ಟಿಕೆಟ್ ಬಯಸುವ ಕುರಿತು ಸಂದೇಶ ಕಳುಹಿಸದಂತೆ ತನ್ನ ಸ್ನೇಹಿತರಿಗೆ ವಿನಂತಿಸಿದರು.
"ವಿಶ್ವಕಪ್ ಸಮೀಪಿಸುತ್ತಿರುವಾಗ, ಪಂದ್ಯಾವಳಿಗೆ ಟಿಕೆಟ್ಗಾಗಿ ನನಗೆ ವಿನಂತಿಸಬೇಡಿ ಎಂದು ನನ್ನ ಎಲ್ಲಾ ಸ್ನೇಹಿತರಿಗೆ ತಿಳಿಸಲು ನಾನು ವಿನಮ್ರವಾಗಿ ಬಯಸುತ್ತೇನೆ. ದಯವಿಟ್ಟು ನಿಮ್ಮ ಮನೆಗಳಿಂದ ಕ್ರಿಕೆಟ್ ವಿಶ್ವಕಪ್ ಆನಂದಿಸಿ," ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯ ಸ್ಟೋರಿಯನ್ನು ಅನುಷ್ಕಾ ಶರ್ಮಾ ಕೂಡ ಮರು ಪೋಸ್ಟ್ ಮಾಡಿದ್ದಾರೆ ಮತ್ತು ವಿಶ್ವಕಪ್ ಸಮಯದಲ್ಲಿ ನನಗೆ ಸಂದೇಶ ಕಳುಹಿಸುವವರಿಗೆ ನಾನು ಪ್ರತಿಕ್ರಿಯಿಸದಿದ್ದರೆ, ನನ್ನಿಂದ ಸಹಾಯ ನಿರೀಕ್ಷಿಸಬೇಡಿ ಎಂದು ತಿಳಿಸಿದ್ದಾರೆ.
"ವಿರಾಟ್ ಕೊಹ್ಲಿಯ ಸ್ಟೋರಿಗೆ ಇನ್ನಷ್ಟು ಸೇರಿಸಲು ನನಗೆ ಅವಕಾಶ ನೀಡಿ. ದಯವಿಟ್ಟು ನಿಮ್ಮ ಸಂದೇಶಗಳಿಗೆ ಉತ್ತರಿಸದಿದ್ದರೆ ಸಹಾಯ ಮಾಡಲು ನನ್ನನ್ನು ವಿನಂತಿಸಬೇಡಿ. ನಿಮ್ಮ ತಿಳುವಳಿಕೆಗಾಗಿ ಧನ್ಯವಾದಗಳು," ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.
ಕ್ರಿಕ್ಬಝ್ನ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅವರು ವೈಯಕ್ತಿಕ ತುರ್ತು ಕಾರಣಗಳಿಂದಾಗಿ ಮುಂಬೈಗೆ ಮರಳಲು ಗುವಾಹಟಿಯಿಂದ ಭಾರತ ತಂಡದ ಶಿಬಿರವನ್ನು ತೊರೆದಿದ್ದರು. ಆದಾಗ್ಯೂ, ಮಾಜಿ ನಾಯಕ ಮಂಗಳವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು ಮತ್ತು ಮರಳಿ ಭಾರತ ತಂಡವನ್ನು ಸೇರಲು ಪ್ರಯಾಣಿಸುತ್ತಿರುವಂತೆ ತೋರುತ್ತದೆ.

ಮಳೆಯಿಂದಾಗಿ ಭಾರತ ತಂಡದ ಎರಡೂ ಅಭ್ಯಾಸ ಪಂದ್ಯಗಳು ರದ್ದಾಗಿವೆ. ಆದಾಗ್ಯೂ, ತಂಡದ ಹೆಚ್ಚಿನ ಬ್ಯಾಟರ್ಗಳು ಈಗಾಗಲೇ ಅತ್ಯುತ್ತಮ ಫಾರ್ಮ್ನಲ್ಲಿರುವಂತೆ ಕಂಡುಬರುತ್ತಿದೆ ಮತ್ತು ಬೌಲಿಂಗ್ ಪ್ರದರ್ಶನ ಕೂಡ ಉತ್ತಮವಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.