
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶನಿವಾರ ಮುಂಜಾನೆ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದರು.
ಮುಂಜಾನೆ ಉಜ್ಜೈನಿಯ ಮಹಾಳೇಶ್ವರ ಜ್ಯೋತಿರ್ಲಿಂಗಕ್ಕೆ ನಡೆಯುವ ಭಸ್ಮ ಆರತಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪಾಲ್ಗೊಂಡರು. ಅಲ್ಲದೆ ಸಾಕಷ್ಟು ಸಮಯ ದೇವಸ್ಥಾನಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಇಲ್ಲಿನ ನವಗ್ರಹ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
"ಪ್ರಾರ್ಥನೆ ಮಾಡಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ಬಂದಿದ್ದೇವೆ, ಮುಂಜಾನೆಯೇ ದೇವರ ದರ್ಶನ ಸಾಕಷ್ಟು ಉತ್ತಮವಾಗಿ ಆಯಿತು" ಎಂದು ಅನುಷ್ಕಾ ಶರ್ಮಾ ದೇವಸ್ಥಾನದಿಂದ ವಾಪಸಾದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂದೋರ್ ನಲ್ಲಿ ಭಾರತ ತಂಡದ ಪಂದ್ಯ ನಡೆಯುವ ವೇಳೆ ತಂಡದ ಅನೇಕ ಕ್ರಿಕೆಟಿಗರು ಉಜ್ಜೈನಿಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಹೊಸದಾಗಿ ಮದುವೆಯಾಗಿರುವ ಕೆಎಲ್ ರಾಹುಲ್ ಅತಿಯಾ ಶೆಟ್ಟಿ, ಅಕ್ಷರ್ ಪಟೇಲ್ ಮೇಹಾ ಪಟೇಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
ಇಂದೋರ್ ನಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದಿದೆ. ಆಸ್ಟ್ರೇಲಿಯಾ 9 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದೆ. ಭಾರತದ ಬ್ಯಾಟಿಂಗ್ ಪಡೆ ಮೂರನೇ ಟೆಸ್ಟ್ನಲ್ಲಿ ವಿಫಲವಾಯಿತು.

ಶತಕ ಗಳಿಸಬೇಕಿದೆ ವಿರಾಟ್ ಕೊಹ್ಲಿ
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಸದ್ಯ ಉತ್ತಮವಾಗಿಲ್ಲ. 2022ರಲ್ಲಿ ನಡೆದ ಏಷ್ಯಾಕಪ್ನಲ್ಲಿ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದರು, ಏಕದಿನ ಮತ್ತು ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಟಿ20 ಮತ್ತು ಏಕದಿನ ಮಾದರಿಯಲ್ಲಿ ಶತಕ ಗಳಿಸುವ ಮೂಲಕ ಮಿಂಚಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು ಆದರೆ, ಅವರು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದಾರೆ.
ಮೊದಲ ಮೂರು ಪಂದ್ಯಗಳಿಂದ 5 ಇನ್ನಿಂಗ್ಸ್ಗಳಲ್ಲಿ 22.20 ಸರಾಸರಿಯಲ್ಲಿ ಕೇವಲ 111 ರನ್ ಗಳಿಸಿದ್ದಾರೆ. ದೆಹಲಿ ಟೆಸ್ಟ್ನಲ್ಲಿ ಅವರು ಗಳಿಸಿದ 44 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಸರಣಿಯ ಕೊನೆಯ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದ್ದು, ಮಾರ್ಚ್ 9ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.