
ನವದೆಹಲಿ, ಫೆಬ್ರವರಿ 20: 'ಸಶಸ್ತ್ರ ಪಡೆಯಲ್ಲಿರುವುದರಿಂದ ಈ ಘಟನೆ ಎಲ್ಲರಿಗಿಂತಲೂ ನನಗೆ ಕೊಂಚ ಹೆಚ್ಚೇ ನೋವುಂಟು ಮಾಡಿದೆ' ಎಂದು ಪ್ರತಿಷ್ಠಿತ ಸ್ಟ್ರಾಂಡ್ಜಾ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿರುವ ಬಾಕ್ಸರ್ ಅಮಿತ್ ಫಂಗಾಲ್ ಹೇಳಿದ್ದಾರೆ. ಗೆದ್ದ ಚಿನ್ನವನ್ನು ಅವರು ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರಿಗೆ ಅರ್ಪಿಸಿದ್ದಾರೆ.
ಬಲ್ಗೇರಿಯಾದಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ನ ಪುರುಷರ 49ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅಮಿತ್ ಬಂಗಾರ ಗೆದ್ದಿದ್ದರು. ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಆಗಿರುವ 23ರ ಹರೆಯದ ಬಾಕ್ಸರ್ ಅಮಿತ್, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ ಭಾರತೀಯ 40ಕ್ಕೂ ಹೆಚ್ಚು ಸೈನಿಕರನ್ನು ಬಲಿಪಡೆದ ದಿನವೇ ಭಾರತೀಯ ಬಾಕ್ಸಿಂಗ್ ತಂಡ ಟೂರ್ನಿಯ ಸಲುವಾಗಿ ಬಲ್ಗೇರಿಯಾದ ಸೋಫಿಯಾಗೆ ಪ್ರಯಾಣ ಬೆಳೆಸಿತ್ತು. ಅನಂತರ ಇಡೀ ಟೂರ್ನಿಯ ವೇಳೆ ಇದೇ ಘಟನೆ ನಮ್ಮ ದೇಸೀ ಬಾಕ್ಸಿಂಗ್ ತಂಡವನ್ನು ಕಾಡುತ್ತಿದ್ದುದಾಗಿ ಅಮಿತ್ ಹೇಳಿಕೊಂಡಿದ್ದಾರೆ.
'ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರು ಮೃತರಾಗಿದ್ದ ಘಟನೆಯಿಂದ ನಾನು ಟೂರ್ನಿಯುದ್ದಕ್ಕೂ ಹತಾಶನಾಗಿದ್ದೆ. ಆದರೆ ಮಡಿದ ಯೋಧರಿಗಾಗಿ ಬಂಗಾರ ಗೆಲ್ಲಬೇಕು ಎಂಬ ಕಿಚ್ಚು, ಸ್ಫೂರ್ತಿ ನನಗೆ ಶಕ್ತಿ ತುಂಬಿತು. ಹೀಗಾಗಿ ನಾನೀ ಬಂಗಾರವನ್ನು ದಾಳಿಯಲ್ಲಿ ಮಡಿದ ನಮ್ಮ ವೀರ ಯೋಧರಿಗೆ ಅರ್ಪಿಸುತ್ತಿದ್ದೇನೆ' ಎಂದು ಫಂಗಲ್ ತಿಳಿಸಿದ್ದಾರೆ.
ಮಂಗಳವಾರ (ಫೆಬ್ರವರಿ 19) ಮುಕ್ತಾಯಗೊಂಡ ಸ್ಟ್ರಾಂಡ್ಜಾ ಮೆಮೋರಿಯಲ್ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಅಮಿತ್ ಅವರು ಕಝಕೀಸ್ತಾನ್ನ ತರ್ಮಿತಾಸ್ ಝುಸುಪೋವ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಕಳೆದ ಏಷ್ಯನ್ ಗೇಮ್ಸ್ನಲ್ಲೂ ಅಮಿತ್ ಭಾರತಕ್ಕೆ ಬಂಗಾರ ತಂದಿದ್ದರು.