ಆರ್ಚರ್ ಆಗುವ ಕನಸು ಕಂಡಿದ್ದ ಮೀರಾಬಾಯಿ
ಕ್ರೀಡಾ ಲೋಕಕ್ಕೆ ಕಾಲಿಡಲು ಕಾರಣವಾದಂತಾ ಮತ್ತೊಂದು ಘಟನೆಯನ್ನು ಸ್ವತಃ ಮೀರಾಬಾಯಿ ಪಿಟಿಐಗೆ ನೀಡಿದ್ದ ಸಂದರ್ಶನದ ವೇಳೆ ಹಂಚಿಕೊಂಡಿದ್ದರು. "ಸೋದರರೆಲ್ಲರೂ ಫುಟ್ಬಾಲ್ ಆಡುತ್ತಿದ್ದರು. ಆಟ ಮುಗಿಸಿ ಮನೆಗೆ ಬಂದಾಗ ಅವರ ಮೈಯೆಲ್ಲಾ ಕೊಳೆಯಿಂದ ತುಂಬಿರುತ್ತಿತ್ತು. ಆಗ ನಾನು ಯಾವುದಾದರೂ ಸ್ವಚ್ಛವಾಗಿ ಹಾಗೂ ಅಚ್ಚುಕಟ್ಟಾಗಿ ಬಟ್ಟೆ ಧರಿಸುವಂತಾ ಕ್ರೀಡೆಯನ್ನು ಆಡಬೇಕೆಂದು ಬಯಸಿದ್ದೆ. ಹೀಗಾಗಿ ಮೊದಲಿಗೆ ಆರ್ಚರ್ ಆಗಬೇಕೆಂದು ಕನಸು ಕಂಡಿದ್ದೆ. ಅವರು ಅಚ್ಚುಕಟ್ಟಾಗಿ ಉತ್ತಮ ಬಟ್ಟೆಯನ್ನು ಧರಿಸುತ್ತಾರೆ" ಎಂದು ವಿವರಿಸಿದ್ದರು.
ಇನ್ನು ಮೀರಾಬಾಯಿ ತರಬೇತಿಗೂ ಸಾಕಷ್ಟು ಸವಾಲಿತ್ತು. ಶಾಲೆಯಿಂದ ತರಬೇತಿ ಸ್ಥಳಲ್ಲೆ 22 ಕಿ.ಮೀ ದೂರದ ಅಂತರವಿತ್ತು. ಎರಡು ಬಸ್ಗಳಲ್ಲಿ ಪ್ರಯಾಣಿಸಿ ಅಭ್ಯಾಸ ನಡೆಸಬೇಕಿತ್ತು. ಈ ಪರಿಶ್ರಮದಿಂದಾಗಿ ಆಕೆ ಭಾರತೀಯ ರೈಲ್ವೇಸ್ನಲ್ಲಿ ಟಿಕೆಟ್ ಇನ್ಸ್ಪೆಕ್ಟರ್ ಆಗಿ ಕೆಲಸ ಪಡೆದರು. ಇದು ಕುಟುಂಬ ನಿರ್ವಹಣೆಯ ಜೊತೆಗೆ ಕ್ರೀಡಾಕ್ಷೇತ್ರದಲ್ಲಿ ತನ್ನ ಕನಸನ್ನು ನನಸಾಗಿಸಲು ಶ್ರಮಿಸಲು ಅವಕಾಶ ನೀಡಿತು.
ಸ್ಪೂರ್ತಿಯಾದ ಕುಂಜರಾಣಿ ದೇವಿ
ಈ ಸಂದರ್ಭದಲ್ಲಿಯೂ ಆರ್ಚರ್ ಆಗುವ ಕನಸನ್ನು ಮೀರಾಬಾಯಿ ಕೈಬಿಟ್ಟಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಮಣಿಪುರದ ಮತ್ತೋರ್ವ ವೈಟ್ಲಿಫ್ಟರ್ ಕುಂಜರಾಣಿ ದೇವಿ ಮೀರಾಬಾಯಿಯನ್ನು ಸ್ಪೂರ್ತಿಗೊಳ್ಳುವಂತೆ ಮಾಡಿದ್ದರು. ಚಾನು ಆಗ ವೈಟ್ಲಿಫ್ಟರ್ ಆಗುವ ಗುರಿಯನ್ನು ದೃಢವಾಗಿಸಿಕೊಂಡರು. 2016ರ ಒಲಿಂಪಿಕ್ಸ್ನಲ್ಲಿ ನಿರಾಸೆ ಅನುಭವಿಸಿದರೂ 2020 ಒಲಿಂಪಿಕ್ಸ್ನಲ್ಲಿ ಈ ಕನಸು ಮೀರಾಬಾಯಿಯ ಕೈಹಿಡಿದಿದೆ. ಇಡೀ ದೇಶವೇ ಮೀರಾಬಾಯಿ ಗೆಲುವಿನಲ್ಲಿ ಸಂಭ್ರಮಿಸುತ್ತಿದೆ.
ಭರವಸೆ ಮೂಡಿಸಿದ್ದವು ಪ್ರದರ್ಶನ
2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು ಚಾನು. 2017ರ ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿಯೇ ಮೀರಾಬಾಯಿ ಪದಕ ಗೆಲ್ಲುವ ಅಥ್ಲೀಟ್ಗಳಲ್ಲಿ ಗುರುತಿಸಿಕೊಂಡಿದ್ದರು.
ಎರಡು ದಶಕದ ಬಳಿಕ ವೈಟ್ಲಿಂಪ್ಸಿಂಗ್ನಲ್ಲಿ ಪದಕ
ವೈಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಗೆದ್ದ ಪದಕ 2000ನೇ ಇಸವಿಯ ಬಳಿಕ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಪದಕವಾಗಿದೆ. ಸಿಡ್ನಿಯಲ್ಲಿ ನಡೆದ ಅಂದಿನ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ನಾಲ್ಕು ಒಲಿಂಪಿಕ್ಸ್ನಲ್ಲಿಯೂ ಭಾರತದ ವೈಟ್ಲಿಫ್ಟರ್ಗಳಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ಆ ಕೊರತೆಯನ್ನು ಮೀರಾಬಾಯಿ ಚಾನು ನೀಗಿಸಿದ್ದಾರೆ.