
ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ. ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ರಸ್ಲರ್ಗಳ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಒಬ್ಬ ರಸ್ಲರ್ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ವಿರುದ್ಧವೂ ಆರೋಪ ಕೇಳಿಬಂದಿತ್ತು.
ಛತ್ರಸಾಲ್ ಸ್ಟೇಡಿಯಂನ ಒಳಗೆ 23ರ ಹರೆಯದ ರಸ್ಲರ್ನ ಮೇಲೆ ಬೇರೆ ರಸ್ಲರ್ಗಳು ಸೇರಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಗಾಯಗೊಂಡ ರಸ್ಲರ್ ಕೊನೆಯುಸಿರೆಳೆದರೆ, ಆತನ ಇಬ್ಬರು ಸ್ನೇಹಿತರು ಗಾಯಗೊಂಡಿದ್ದರು.
'ಜಲಂಧರ್ನಲ್ಲಿ ಸುಶೀಲ್ ಕುಮಾರ್ನನ್ನು ಬಂಧಿಸಲಾಗಿದೆ. ಗಲಾಟೆ ಪ್ರಕರಣದಲ್ಲಿನ ಆರೋಪಿ, ಸುಶೀಲ್ ಸಹಚರ ಅಜಯ್ ಕುಮಾರ್ನನ್ನೂ ಬಂಧಿಸಲಾಗಿದೆ,' ಎಂದು ಮೂಲವೊಂದು ಐಎಎನ್ಎಸ್ಗೆ ಮಾಹಿತಿ ನೀಡಿದೆ. ಮೇ 18ರಂದು ಸುಶೀಲ್ ಈ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಿತ ಜಾಮೀನಿನ ಮೊರೆ ಹೋಗಿದ್ದರು. ಆದರೆ ದೆಹಲಿ ಕೋರ್ಟ್ ಜಾಮೀನು ನಿರಾಕರಿಸಿತ್ತು.
ಪ್ರಕರಣದ ಬಳಿಕ ಸುಶೀಲ್ ತಲೆ ಮರೆಸಿಕೊಂಡಿದ್ದರಿಂದ ಕಳೆದ ವಾರ ಸುಶೀಲ್ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದ್ದರು.