
ಮೀರತ್, ಜೂ. 9: ಜರ್ಮನಿಯ ಸುಹ್ಲ್ ನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ಜೂನಿಯರ್ ವರ್ಲ್ಡ್ ಕಪ್ ಗೆ ಆಯ್ಕೆಯಾಗಿದ್ದರೂ ಹಣದ ಸಮಸ್ಯೆಯಿಂದಾಗಿ ಸಂಕಟಕ್ಕೀಡಾಗಿದ್ದ ದಲಿತ ಕಾರ್ಮಿಕನ ಮಗಳು ಪ್ರಿಯಾ ಸಿಂಗ್ ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ 4.5 ಲಕ್ಷ ರೂ. ಆರ್ಥಿಕ ನೆರವು ನೀಡಿದೆ.
ದುಡ್ಡಿಲ್ಲದೆ ಪರದಾಡುತ್ತಿದ್ದ ಯುವ ಮಹಿಳಾ ಶೂಟರ್ಗೆ ಯೋಗಿ ಸರ್ಕಾರ ನೆರವು
ಜೂನ್ 22ರಿಂದ ಜರ್ಮನಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನ 50 ಮೀ. ರೈಫಲ್ ಪ್ರೋನ್ ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದ 6 ಮಂದಿಯಲ್ಲಿ 19ರ ಹರೆಯದ ಪ್ರಿಯಾ ಕೂಡ ಒಬ್ಬರಾಗಿದ್ದರು. ಆದರೆ ಪ್ರಿಯಾ ಅವರದ್ದು ಬಡ ಕುಟುಂಬವಾದ್ದರಿಂದ ಮುಂದಿನ ಸ್ಪರ್ಧೆಗೆ ತೆರಳಲು ಸಮಸ್ಯೆಯಾಗಿ ಪರದಾಡುವಂತಾಗಿತ್ತು. ಇದನ್ನು ಮನಗಂಡ ಯೂಪಿ ಸರ್ಕಾರ ಪ್ರತಿಭಾನ್ವಿತೆಗೆ ಆರ್ಥಿಕ ನೆರವು ನೀಡಿದೆ.
ಸುಹ್ಲ್ ಜೂನಿಯರ್ ಶೂಟಿಂಗ್ ವರ್ಲ್ಡ್ ಕಪ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ 6 ಮಂದಿಯ ನಡುವೆ ತನ್ನ ಹೆಸರೂ ಇರುವುದನ್ನು ಕಂಡು ಪ್ರಿಯಾ ಖುಷಿಗೊಂಡಿದ್ದರು. ಆದರೆ ಆಯ್ಕೆಯಾದವರಲ್ಲಿ ಮೊದಲ ಮೂರು ಜನರಿಗಷ್ಟೇ ಆರ್ಥಿಕ ಸಹಾಯ ನೀಡುವುದಾಗಿ ಯೂಪಿ ಸರ್ಕಾರ ಪ್ರಕಟಿಸಿದ್ದರಿಂದ ಶಾರ್ಟ್ ಲಿಸ್ಟ್ ನಲ್ಲಿ 4ನೇ ಸ್ಥಾನದಲ್ಲಿದ್ದ ಪ್ರಿಯಾ ಕನಸು ಕಮರುವ ಸ್ಥಿತಿಯಲ್ಲಿತ್ತು. ಹೀಗಾಗಿ ಪ್ರಿಯಾ ಮತ್ತವರ ತಂದೆ ಬ್ರಿಜ್ಪಾಲ್ ಸಿಂಗ್ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವು ಯಾಚಿದ್ದರು. ಅವರ ಬೇಡಿಕೆಗೀಗ ಸ್ಪಂದನೆ ದೊರೆತಿದೆ.
ಅರ್ಹತಾ ಸ್ಪರ್ಧೆಯಲ್ಲಿ ಪ್ರಿಯಾ ಬಾಡಿಗೆ ರೈಫಲ್ ನಲ್ಲಿ ಸ್ಪರ್ಧಿಸಿ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದರು. ಆದರೆ ಜರ್ಮನಿಯಲ್ಲಿ ನಡೆಯಲಿರುವ ಜೂನಿಯರ್ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಪಾಲ್ಗೊಳ್ಳಲು ಪ್ರಿಯಾ ಅವರಿಗೆ ಸುಮಾರು 3-4 ಲಕ್ಷ ರೂ.ಗಳ ಅವಶ್ಯಕತೆಯಿತ್ತು.
ಕೂಲಿ ಜೀವನ ಸಾಗಿಸುವ ಕುಟುಂಬ ಪ್ರಿಯಾ ಅವರದ್ದಾಗಿದ್ದರಿಂದ ಆರಂಭದಲ್ಲಿ ಪ್ರಿಯಾ ಆರ್ಥಿಕ ಸಹಾಯ ದೊರೆಯದೆ ಚಡಪಡಿಸಿದ್ದರು. ಆದರೆ ಈಗ ಕ್ರೀಡಾಪಟುವಿನ ಕೂಗನ್ನು ಯೂಪಿ ಸರ್ಕಾರ ಪರಿಗಣಿಸಿರುವುದರಿಂದ ಶೂಟರ್ ಪ್ರಿಯಾ ಈಗ ನಿರಾಳರಾಗಿದ್ದಾರೆ. ಪ್ರಿಯಾ ಕುಟುಂಬಸ್ಥರೂ ಸರ್ಕಾರದ ಆರ್ಥಿಕ ನೆರವಿನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.