ದಾವಣಗೆರೆ, ಆಗಸ್ಟ್ 01: ಎದುರಾಳಿಗಳನ್ನು ಪಟ್ಟು ಹಾಕಿ ನೆಲಕಪ್ಪಳಿಸುತ್ತಿದ್ದ ರಾಷ್ಟ್ರಮಟ್ಟದ ಕುಸ್ತಿಪಟು ಮೈಸೂರಿನ ವಿಕಾಸ್ ಗೌಡ ಅನಾರೋಗ್ಯದಿಂದ ಇಂದು ಕೊನೆ ಉಸಿರೆಳೆದಿದ್ದಾರೆ.
ದಾವಣಗೆರೆಯಲ್ಲಿ ಕುಸ್ತಿಪಟ್ಟುಗಳನ್ನು ಕಲಿಯುತ್ತಿದ್ದ ವಿಕಾಸ್ ಗೌಡ ಅವರು ರಾಷ್ಟ್ರಮಟ್ಟದ ಕುಸ್ತಿಪಟುವಾಗಿದ್ದು, ಹಲವು ರಾಷ್ಟ್ರಮ ಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರ ನಿಧನದಿಂದ ರಾಜ್ಯದ ಒಬ್ಬ ಉದಯೋನ್ಮುಖ ಕ್ರೀಡಾಪಟುವನ್ನು ಕಳೆದುಕೊಂಡಂತಾಗಿದೆ.
ಮೈಸೂರಿನ ಸೀತಾಪುರ ಗ್ರಾಮದ ವಿಕಾಸ್ ಗೌಡ ಕಳೆದ ನಾಲ್ಕು ವರ್ಷಗಳಿಂದ ದಾವಣಗೆರೆಯ ಕ್ರೀಡಾ ನಿಲಯದಲ್ಲಿದ್ದು ತರಬೇತಿ ಪಡೆಯುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಕಾಸ್ ಗೌಡ ನಗರದ ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿದ್ದರು.
ವಿಪರೀತ ಸೊಂಟ ನೊವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಕಾಸ್, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ. ಅರಳಿ ಬಾಳಬೇಕಿದ್ದ ಕ್ರೀಡಾಪ್ರತಿಭೆಯೊಂದು ಆರಂಭದಲ್ಲೇ ಕಮರಿದಂತಾಗಿದೆ.