ಬೆಂಗಳೂರು, ಅಕ್ಟೋಬರ್ 01: ಗೋವಾದ ಫಟೋರ್ಡಾದ ಮಲ್ಟಿ ಪರ್ಪಸ್ ಗ್ರೌಂಡ್ನಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಅಭೂತಪೂರ್ವ ಗೆಲುವು ದಾಖಲಿಸಿದೆ. ಎರಡನೇ ಶ್ರೇಯಾಂಕದ ಉತ್ತರ ಪ್ರದೇಶ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಮಂಗಳವಾರ ಇಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ 2-1 ಗೋಲುಗಳಿಂದ ಉತ್ತರ ಪ್ರದೇಶವನ್ನು ಸೋಲಿಸಿತು.
ಮೊದಲ ಸಿಂಗಲ್ಸ್ನಲ್ಲಿ ಅಮೋಘ ಹೋರಾಟ ನಡೆಸಿದ ಆದಿಲ್ ಕಲ್ಯಾಣ್ಪುರ ಅವರು ಸಿದ್ಧಾರ್ಥ್ ವಿಶ್ವಕರ್ಮ ವಿರುದ್ಧ 3-6, 3-6 ಅಂತರದಲ್ಲಿ ಸೋತರು. ಎಸ್ಡಿ ಪ್ರಜ್ವಲ್ ದೇವ್ ಅವರು 6-4, 6-2 ನೇರ ಸೆಟ್ಗಳಿಂದ ಸಿದ್ದಾರ್ಥ್ ರಾವತ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದರು. ಈ ಮೂಲಕ ಕರ್ನಾಟಕ ತಂಡವನ್ನು ಪೈನಲ್ ಪ್ರವೇಶಿಸುವಂತೆ ಮಾಡಿದರು.

ನಿರ್ಣಾಯಕ ಡಬಲ್ಸ್ ಟೈನಲ್ಲಿ, ಪ್ರಜ್ವಲ್ ಮತ್ತು ಆದಿಲ್ ನಂತರ ಪ್ರಬಲ ಡಬಲ್ಸ್ ಜೋಡಿಯಾದ ವಿಶ್ವಕರ್ಮ ಮತ್ತು ರಾವತ್ ಅವರನ್ನು 6-3, 7-5 ಅಂತರದಿಂದ ಸೋಲಿಸಿದರು. ಹರಿಯಾಣ ಮತ್ತು ತಮಿಳುನಾಡು ನಡುವಿನ ಇನ್ನೊಂದು ಸೆಮಿಫೈನಲ್ನಲ್ಲಿ ಕರ್ನಾಟಕವು ವಿಜೇತರನ್ನು ಎದುರಿಸಲಿದೆ.
ಇದಕ್ಕೂ ಮುನ್ನ ಕರ್ನಾಟಕ 3ನೇ ಶ್ರೇಯಾಂಕದ ಸರ್ವಿಸಸ್ ತಂಡವನ್ನು ಸೋಲಿಸಿ ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಸೂರಜ್ ಪ್ರಬೋಧ್ ಅವರು ಇಶಾಕ್ ಎಕ್ಬಾಲ್ ವಿರುದ್ಧ 4-6, 2-6 ಸೆಟ್ಗಳಿಂದ ಸೋತರು. ಆ ನಂತರ ಪ್ರಜ್ವಲ್ ರಿಷಬ್ ಅಗರವಾಲ್ ವಿರುದ್ಧ 6-2, 6-4 ಅಂತರದಲ್ಲಿ ಜಯ ಸಾಧಿಸಿ ಸಮಬಲ ಸಾಧಿಸಿದರು. ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಪ್ರಜ್ವಲ್ ಮತ್ತು ಆದಿಲ್ 6-1, 6-4 ನೇರ ಸೆಟ್ಗಳಿಂದ ಇಶಾಕ್ ಎಕ್ಬಾಲ್ ಮತ್ತು ಫೈಸಲ್ ಕಮರ್ ಅವರನ್ನು ಸೋಲಿಸಿದರು.
ಮಹಿಳಾ ತಂಡವು ತಮಿಳುನಾಡು ವಿರುದ್ಧ ಕ್ವಾರ್ಟರ್ಫೈನಲ್ನ್ನಲ್ಲಿ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ತನ್ನ ಟೂರ್ನಿಯ ಜರ್ನಿಯನ್ನು ಕೊನೆಗೊಳಿಸಿತು.