
ಟೋಕಿಯೋ, ಜುಲೈ 24: ಪ್ರಸಕ್ತ ಸಾಲಿನಲ್ಲಿ ಕಳಾಹೀನ ಪ್ರದರ್ಶನ ಮುಂದುವರಿಸಿರುವ ಭಾರತದ ಅಗ್ರಮಾನ್ಯ ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಒಂದು ಗಂಟೆ ಕಾಲ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಒತ್ತಡ ನಿಭಾಯಿಸುವಲ್ಲಿ ವಿಫಲರಾದ ಎಂಟನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, ಅಂತಿಮವಾಗಿ 13-21, 21-11, 22-20 ಅಂತರದ ಗೇಮ್ಗಳಿಂದ ಸ್ವದೇಶಿ ಮಿತ್ರ ಆಟಗಾರ ಹಾಗೂ ಮಾಜಿ ರಾಷ್ಟ್ರೀಯ ಚಾಂಪಿಯನ್ ಎಚ್.ಎಸ್ ಪ್ರಣೋಯ್ ಎದುರು ನಿರಾಸೆ ಅನುಭವಿಸಿದರು.
ಪಂದ್ಯದಲ್ಲಿ ಮೊದಲ ಗೇಮ್ ಅನ್ನು 21-13 ಅಂಕಗಳಿಂದ ಸುಲಭವಾಗಿ ಗೆದ್ದುಕೊಂಡ ಶ್ರೀಕಾಂತ್, ಬಳಿಕ ಪ್ರಣೋಯ್ ಅವರ ಆಕ್ರಮಣಕಾರಿ ಆಟದ ಎದುರು ನಿರುತ್ತರರಾಗಿ ಎರಡನೇ ಗೇಮ್ನಲ್ಲಿ 11-21 ಅಂತರದ ಹೀನಾಯ ಸೋಲುಂಡರು. ತದನಂತರ ಮೂರನೇ ಹಾಗೂ ನಿರ್ಣಾಯಕ ಗೇಮ್ ಸಮಬಲದಲ್ಲಿ ಸಾಗಿತ್ತಾದರೂ ಅಂತಿಮವಾಗಿ 22-20ರ ಅಂತರದಲ್ಲಿ ಪ್ರಣೋಯ್ ಗೆದ್ದು ಮಂದಹಾಸ ಬೀರಿದರು.
ಈ ಪಂದ್ಯದಕ್ಕೂ ಮುನ್ನ ಈ ಇಬ್ಬರೂ ಆಟಗಾರರು ಒಟ್ಟು ಐದು ಬಾರಿ ಮುಖಾಮುಖಿಯಾಗಿದ್ದರು. ಇದರಲ್ಲಿ ಶ್ರೀಕಾಂತ್ 4-1 ಮೇಲುಗೈ ಹೊಂದಿದ್ದರು. ಶ್ರೀಕಾಂತ್ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಇದಕ್ಕೂ ಮುನ್ನ ಇಂಡೊನೇಷ್ಯಾ ಓಪನ್ನಲ್ಲೂ ಎರಡನೇ ಸುತ್ತಿನಲ್ಲಿ ಹಾಂಕಾಂಗ್ನ ಕಾ ಲಾಂಗ್ ಅಂಗುಸ್ ಎದುರು 17-21, 19-21 ನೇರ ಸೆಟ್ಗಳ ಸೋಲನುಭವಿಸಿದ್ದರು.
ಇದೇ ವೇಳೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜೆರ್ರಿ ಛೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದು, ಚೀನಾದ ಝೆಂದ್ ಸೀ ವೀ ಮತ್ತು ಹುವಾಂಗ್ ಯಾ ಕಿಯಾಂಗ್ ಎದುರು 11-21, 14-21 ಅಂತರದಲ್ಲಿ ಸುಲಭವಾಗಿ ಶರಣಾಗಿದೆ.