
ಭಾರತದ ಅಗ್ರ ಶ್ರೇಯಾಂಕದ ಆಟಗಾರ ಹೆಚ್ಎಸ್ ಪ್ರಣಯ್ ಇಂಡಿಯಾ ಓಪನ್ 2023ರ ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿ ನಿರ್ಗಮಿಸಿದ್ದಾರೆ. ಪ್ರಣಯ್ಗೆ ಬೆಂಗಳೂರು ಮೂಲದ 21ರ ಹರೆಯದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ ಲಕ್ಷ್ಯ ಸೇನ್ ಸೋಲಿನ ರುಚಿ ತೋರಿಸಿದ್ದು ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಪ್ರಣಯ್ ವಿರುದ್ಧದ ಮುಖಾಮುಖಿಯಲ್ಲಿ ಲಕ್ಷ್ಯ ಸೆನ್ ಭರ್ಜರಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. 21-14, 21-15 ಅಂಕಗಳಿಂದ ನೇರ ಸೆಟ್ಗಳ ಜಯ ಸಾಧಿಸಿದ್ದಾರೆ ಲಕ್ಷ್ಯ ಸೇನ್. ಪ್ರಣಯ್ ಈ ಪಂದ್ಯದಲ್ಲಿ ಹಲವಾರು ಅನಗತ್ಯ ತಪ್ಪುಗಳನ್ನು ಎಸಗುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಆಕ್ರಮಣಶೀಲತೆ, ವೇಗದ ಪ್ರತಿಕ್ರಿಯೆಗಳಿಂದಾಗಿ ಲಕ್ಷ್ಯ ಸೇನ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಪ್ರಣಯ್ಗೆ ಕಮ್ಬ್ಯಾಕ್ ಮಾಡಲು ಅವಕಾಶವೇ ದೊರೆಯಲಿಲ್ಲ.
ಇಂಡಿಯಾ ಓಪನ್ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಲಕ್ಷ್ಯಸೇನ್ ಹಾಗೂ ಭಾರತದ ಅಗ್ರ ಶ್ರೇಯಾಂಕದ ಆಟಗಾರ ಪ್ರಣಯ್ ನಡುವಿನ ಸೆಣೆಸಾಟ ಈ ಬಾರಿಯೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಮುಖಾಮುಖಿಯಲ್ಲಿ ಲಕ್ಷ್ಯ ಸೇನ್ ಮೇಲುಗೈ ಸಾಧಿಸಿ ಮಿಂಚಿದ್ದಾರೆ. 2022ರಲ್ಲಿಅನೇಕ ಟೂರ್ನಮೆಂಟ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದ ಲಕ್ಷ್ಯಸೇನ್ ಈ ಗೆಲುವಿನಿಂದಿಗೆ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಲಕ್ಷ್ಯ ಸೇನ್ ಹಾಗೂ ಹೆಚ್ಎಸ್ ಪ್ರಣಯ್ ಇಬ್ಬರು ಕೂಡ 2022ರಲ್ಲಿ ಭಾರತ ಥಾಮಸ್ ಕಪ್ ಗೆಲ್ಲಲು ಮಹತ್ವದ ಪಾತ್ರವಹಿಸಿದ್ದರು.
ಇಂಡಿಯಾ ಓಪನ್ 2023ರ ಮೊದಲ ಸುತ್ತಿನಿಂದಲೇ ಹೊರಬಿದ್ದ ಆಟಗಾರಲ್ಲಿ ಪ್ರಣಯ್ ಪ್ರಮುಖ ಆಟಗಾರನಾಗಿದ್ದಾರೆ. ಮತ್ತೊಂದೆಡೆ ಮಾಜಿ ವಿಶ್ವ ಚಾಂಪಿಯನ್ ಜಪಾನ್ನ ಕೆಂಟೊ ಮೊಮೊಟಾ ಅವರು ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದಾರೆ. ಕೆಂಟೊ ಮೊಮೊಟಾ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ವಿರುದ್ಧ ನೇರ ಸೆಟ್ನಲ್ಲಿ ಸೋತು ಹೊರಬಿದ್ದ ಮತ್ತೋರ್ವ ಪ್ರಮುಖ ಆಟಗಾರನಾಗಿದ್ದಾರೆ.