
ನವದೆಹಲಿ, ಜು. 6: ಶುಕ್ರವಾರ ನಡೆದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮತ್ತು ಎಚ್ಎಸ್ ಪ್ರಣಯ್ ಅವರು ಸೋಲುವ ಮೂಲಕ ಭಾರತದ ಸವಾಲು ಅಂತ್ಯಗೊಂಡಿದೆ. ಸಿಂಧು ಅವರು ಅವರು ಹಿ ಬಿಂಗ್ಜಿಯಾವೊ ವಿರುದ್ಧ, ಪ್ರಣಯ್ ಅವರು ಶಿ ಯುಕಿ ವಿರುದ್ಧ ಸೋಲೊಪ್ಪಿಕೊಂಡರು.
ಸಿಂಧು, ಪ್ರಣಯ್ ಇಬ್ಬರ ಮೇಲೂ ಗೆಲ್ಲುವ ನಿರೀಕ್ಷೆಯಿಡಲಾಗಿತ್ತು. ಆದರೆ ಇಬ್ಬರೂ ಒಂದೇ ದಿನ ನಿರಾಸೆ ಮೂಡಿಸಿದ್ದಾರೆ. ವನಿತಾ ಸಿಂಗಲ್ಸ್ ನಲ್ಲಿ ಇಂದು (ಶುಕ್ರವಾರ) ಚೈನೀಸ್ ಆಟಗಾರ್ತಿ ಬಿಂಗ್ಜಿಯಾವೊ ವಿರುದ್ಧ ಪಂದ್ಯಕ್ಕಿಳಿದಿದ್ದ ಸಿಂಧು 14-21, 15-21ರ ಸೋಲನುಭವಿಸಿದರು.
ಪಂದ್ಯದ ಆರಂಭದಿಂದಲೂ ಸಿಂಧು ಚೈನೀಸ್ ಆಟಗಾರ್ತಿ ವಿರುದ್ಧ ಅಂಕ ಕದಿಯಲು ಪರದಾಡಿದರು. ಬಿಂಗ್ಜಿಯಾವೊ ಅವರ ಸಾಮರ್ಥ್ಯಕ್ಕೆ, ವೇಗಕ್ಕೆ ಹೊಂದಿಕೊಳ್ಳಲು ಸಿಂಧು ಅವರಿಂದಾಗಲಿಲ್ಲ. ಅತ್ತ ಪುರುಷರ ಸಿಂಗಲ್ಸ್ ನಲ್ಲಿ ಪ್ರಣಯ್ ಕೂಡ ಚೈನೀಸ್ ಆಟಗಾರ ಶಿ ಯುಕಿ ವಿರುದ್ಧ 17-21, 18-21ರ ಹಿನ್ನಡೆ ಅನುಭವಿಸಿದರು.
ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಪಂದ್ಯಾಟದ ಮೊದಲ ಸುತ್ತಿನಲ್ಲೇ ಹೊರ ನಡೆದಿದ್ದು, ಮತ್ತೊಬ್ಬಳು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಅವರೂ 16ನೇ ಸುತ್ತಿನ ಪಂದ್ಯದಲ್ಲಿ ಹೊರ ನಡೆದಿದ್ದರು. ಇಲ್ಲಿಗೆ ಈ ಬಾರಿಯ ಇಂಡೋನೇಷ್ಯಾ ಓಪನ್ ನಲ್ಲಿ ಭಾರತದ ಎಲ್ಲ ಆಟಗಾರರೂ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ಎಡವಿದಂತಾಗಿದೆ.