ಭಾರತದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರ ನಡೆಯ ವಿರುದ್ಧ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ
ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಹೀಗೆ ಆಕ್ರೋಶದಿಂದ ಹೇಳಿಕೆಯನ್ನು ನೀಡಿದ್ದಾರೆ.
ಈ ಹಿಂದೆ ಭಾರತ ತಂಡವನ್ನು ಎಲ್ಲಾ ಭಾಗಗಳ ಬ್ಯಾಡ್ಮಿಂಟನ್ ಆಟಗಾರರು ಪ್ರತಿನಿಧಿಸುತ್ತಿದ್ದರು. ಗೋಪಿಚಂದ್ ಆಡುತ್ತಿದ್ದಾಗಲೂ ಇತರೆ ರಾಜ್ಯದ ಆಟಗಾರರು ಕೂಡ ಇರುತ್ತಿದ್ದರು. ದೇಶದ ಬೇರೆ ಬೇರೆ ಭಾಗಗಳಿಂದ ಉತ್ಕೃಷ್ಟ ಆಟಗಾರರು ಹೊರಹೊಮ್ಮುತ್ತಿದ್ದರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದಿದ್ದಾರೆ.
ದಿಗ್ಗಜ ಆಟಗಾರರ ಅನುಪಸ್ಥಿತಿಯಲ್ಲೇ ನಡೆಯುತ್ತಾ ಯುಎಸ್ ಓಪನ್?
ಕಳೆದ 10ರಿಂದ 12 ವರ್ಷಗಳ ಅವಧಿಯಲ್ಲಿ ಹೈದರಾಬಾದ್ ಅಥವಾ ತೆಲುಗಿನ ಆಟಗಾರರು ಮಾತ್ರ ಭಾರತ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ನಿರ್ದಿಷ್ಟ ಅಕಾಡೆಮಿಯ ಆಟಗಾರರನ್ನೇ ಕಾಣಬಹುದಾಗಿದೆ ಎಂದು ಜ್ವಾಲಾ ಗುಟ್ಟಾ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
'ಭಾರತ ಪದಕ ಗೆದ್ದರೆ ಅದಕ್ಕೆ ಗೋಪಿಚಂದ್ ಅವರ ತರಬೇತಿ ಕಾರಣ , ನಾವು ಉತ್ತಮವಾಗಿ ಆಡಲು ಸಾಧ್ಯವಾಗದೆ ಹೋದರೆ ಅದಕ್ಕೆ ವ್ಯವಸ್ಥೆ ಕಾರಣ ಎನ್ನುವ ಪರಿಸ್ಥಿತಿ ಇದೆ ಎಂದು ಜ್ವಾಲಾ ಗುಟ್ಟಾ ಗೋಪಿ ಚಂದ್ ಅವರ ಕಾರ್ಯವೈಖರಿಯ ವಿರುದ್ಧ ಸಿಡಿದಿದ್ದಾರೆ.
ಬ್ಯಾಡ್ಮಿಟನ್ನಲ್ಲಿ ಆಂತರಿಕ ರಾಜಕೀಯ ಹೆಚ್ಚಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ ಜ್ವಾಲಾ ಗುಟ್ಟಾ. ಇದೇ ಕಾರಣದಿಂದಾಗಿ ವಿದೇಶಿ ತರಬೇತುದಾರರು ಅಧಿಕಾರಾವಧಿ ಪೂರ್ಣಗೊಳಿಸದೆ ಹೋಗಿದ್ದಾರೆ. ಅವಮಾನವನ್ನು ಅನುಭವಿಸಿ ಹೋಗಿದ್ದಾರೆ. ಅದಕ್ಕೆಲ್ಲಾ ನಾನೇ ಸಾಕ್ಷಿಯಾಗಿದ್ದೆ ಎಂದು ಜ್ವಾಲಾ ಹೇಳಿಕೊಂಡಿದ್ದಾರೆ.