
ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಕಿದಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧುಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ವರ್ಲ್ಡ್ ಟೂರ್ಗೆ ಅರ್ಹತೆ ಲಭಿಸಿದೆ. ಈ ಟೂರ್ನಿ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಜನವರಿ 27ರಿಂದ ಜನವರಿ 31ರ ವರೆಗೆ ನಡೆಯಲಿದೆ.
ಥೈಲ್ಯಾಂಡ್ ಓಪನ್ನ ಡಬಲ್ಸ್ನಲ್ಲಿ ಭಾರತದ ಜೋಡಿ ಸಾತ್ವಿಕ್ ಸಾಯ್ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಮಿಕ್ಸ್ಡ್ ಡಬಲ್ಸ್ನಲ್ಲಿ ಸಾತ್ವಿಕ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಸೆಮಿಫೈನಲ್ಗೆ ಪ್ರವೇಶಿಸಿತ್ತಾದರೂ ಅವಕಾಶವನ್ನು ಫೈನಲ್ನತ್ತ ಕೊಂಡೊಯ್ಯುವಲ್ಲಿ ಸೋತಿತ್ತು.
ಟೂರ್ ಸ್ಪರ್ಧೆಗಳಲ್ಲಿ ಅಗ್ರ ಸ್ಥಾನದಲ್ಲಿರುವ ಎಂಟು ಆಟಗಾರರು ಮತ್ತು ತಂಡಗಳು ಮಾತ್ರ ವರ್ಷದ ಕೊನೆಯಲ್ಲಿ ನಡೆಯುವ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ಗೆ ಪ್ರವೇಶ ಪಡೆದುಕೊಳ್ಳುತ್ತವೆ. ಈ ಸ್ಪರ್ಧೆ ಅಸಲಿಗೆ ಕಳೆದ ಡಿಸೆಂಬರ್ನಲ್ಲಿ ಚೀನಾದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾವೈರಸ್ ಕಾರಣದಿಂದಾಗಿ 2021ರ ಜನವರಿಗೆ ಥೈಲ್ಯಾಂಡ್ಗೆ ಮುಂದೂಡಲ್ಪಟ್ಟಿತ್ತು.
ಶ್ರೀಕಾಂತ್ ಅವರು ವಿಶ್ವ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದ್ದಾರೆ, ಆದರೆ ಟೂರ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನ ಪಡೆದುಕೊಂಡಿದ್ದರು. ವಿಶ್ವ ರ್ಯಾಂಕಿಂಗ್ನಲ್ಲಿ ಸಿಂಧು 7ನೇ ಸ್ಥಾನದಲ್ಲಿದ್ದಾರೆ. ಆದರೆ ಟೂರ್ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಟೂರ್ ರ್ಯಾಂಕಿಂಗ್ನಲ್ಲಿ 8ರೊಳಗೆ ಥೈಲ್ಯಾಂಡ್ನ 3 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಫೈನಲ್ಸ್ಗೆ ಒಂದು ದೇಶದಿಂದ ಇಬ್ಬರಿಗಷ್ಟೇ ಪ್ರವೇಶ ಸಿಗುತ್ತದೆ. ಜಪಾನ್ನ ನವೋಮಿ ಒಕುಹರ ಕೂಡ ಎಂಟರೊಳಗೆ ಸ್ಥಾನ ಪಡೆದಿದ್ದರು. ಒಕುಹರ ಫೈನಲ್ಸ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅದೃಷ್ಟವಶಾತ್ ಸಿಂಧುಗೆ ಫೈನಲ್ಸ್ಗೆ ಅಹರ್ತೆ ಲಭಿಸಿದೆ.