
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ಬುಧವಾರ (ಜುಲೈ 28) ಸಾವನ್ನಪ್ಪಿದ್ದಾರೆ. ಸುದೀರ್ಘ ವೃತ್ತಿ ಜೀವನ ಕಂಡಿದ್ದ ನಂದು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ನಾಟೇಕರ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ, ಅನೇಕ ಕ್ರೀಡಾಪಟುಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತದ ಕ್ರೀಡಾ ಇತಿಹಾಸದಲ್ಲಿ ನಂದು ನಾಟೇಕರ್ ಅವರಿಗೆ ವಿಶೇಷ ಸ್ಥಾನವಿದೆ. ಅವರು ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಮತ್ತು ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಯಶಸ್ಸು ಉದಯೋನ್ಮುಖ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿ ಮುಂದುವರಿದಿದೆ. ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಲೋಚನೆಗಳು ಒತ್ತಾಸೆಯಾಗಿರುತ್ತವೆ. ಓಂ ಶಾಂತಿ." ಎಂದು ಸಂತಾಪ ಸೂಚಿಸಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ, ಸಂಶೋಧಕ ಜಾಯ್ ಭಟ್ಟಾಚಾರ್ಜ್ಯ, ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಮೊದಲಾದವರು ನಾಟೇಕರ್ ಸಾವಿಗೆ ಸಂತಾಪ ಸೂಚಿಸಿ ಸ್ಟೀಟ್ ಮಾಡಿದ್ದಾರೆ.
88 ವರ್ಷ ಪ್ರಾಯವಾಗಿದ್ದ ನಾಟೇಕರ್, ತನ್ನ ವೃತ್ತಿ ಬದುಕಿನಲ್ಲಿ 100ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು. ನಾಟೆಕಾರ್ ಅವರು ಪುತ್ರ ಗೌರವ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಂದು ಜನಿಸಿದ್ದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ. ಅವರಿಗೆ 1961ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು.