
ನವದೆಹಲಿ, ಜುಲೈ 26: ಕಳೆದ ವರ್ಷ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕಳೆದುಕೊಂಡಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಈ ಬಾರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಟೂರ್ನಿಯಲ್ಲಿ ವಿಶ್ವ ನಂ. 1 ತೈವಾನಿ ಆಟಗಾರ್ತಿ ತೈ ಝು ಯಿಂಗ್ ಅವರನ್ನು ಸೋಲಿಸುವುದಾಗಿ ಸಿಂಧು ಹೇಳಿದ್ದಾರೆ.
ಜುಲೈ 30ರ ಸೋಮವಾರದಿಂದ ಚೀನಾದಲ್ಲಿ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಆರಂಭಗೊಂಡು ಆಗಸ್ಟ್ 5ರ ವರೆಗೆ ನಡೆಯಲಿದೆ. ಈ ಪ್ರಮುಖ ಟೂರ್ನಿಗಾಗಿ ತಯಾರಿ ನಡೆಸುತ್ತಿರುವ ಭಾರತದ ಭರವಸೆಯ ಆಟಗಾರ್ತಿ ಸಿಂಧು ಈ ಸಾರಿ ಚಿನ್ನ ತನ್ನದಾಗಿಸಿಕೊಳ್ಳುವ ಭರವಸೆ ನೀಡಿದ್ದಾರೆ.
'ನಾನೀಗ ತೈ ಝು ಯಿಂಗ್ ಅವರನ್ನು ಸೋಲಿಸಬಲ್ಲೆ. ಆ ವಿಶ್ವಾಸ ನನಗಿದೆ. ಮಲೇಷಿಯಾದಲ್ಲಿ ಸೋತಿದ್ದಕ್ಕೆ ಬೇರೆ ಕಾರಣವಿತ್ತು. ಆದರೆ ಚೀನಾದಲ್ಲಿ ನಾನು ಎಚ್ಚರಿಕೆಯ ಆಟ ಆಡಲಿದ್ದೇನೆ. ಎದುರಾಳಿಗೆ ಪ್ರಬಲ ಪೈಪೋಟಿ ನೀಡಲಿದ್ದೇನೆ' ಎಂದು ಸಿಂಧು ಹೇಳಿದ್ದಾರೆ.
ಥಾಯ್ಲೆಂಡ್ ಓಪನ್ ನಲ್ಲಿ ಸಿಂಧು, ಜಪಾನ್ ನ ನೋಜೊಮಿ ಒಕುಹರಾ ವಿರುದ್ಧ 15-21, 18-21ರ ನೇರ ಸೆಟ್ ಸೋಲು ಕಂಡಿದ್ದರು. 50 ನಿಮಿಷಗಳವರೆಗಿನ ಇಬ್ಬರ ಕಾದಾಟದ ವೇಳೆ ಸಿಂಧು ಕೆಲವೊಂದು ತಪ್ಪುಗಳನ್ನು ಮಾಡಿದ್ದು ಎದುರಾಳಿಗೆ ಅನುಕೂಲವನ್ನೊದಗಿಸಿತ್ತು.
ಥಾಯ್ಲೆಂಡ್ ಓಪನ್ ಪಂದ್ಯವನ್ನು ನೆನಪಿಸಿಕೊಂಡ ಸಿಂಧು, 'ಅಂದಿನ ಪಂದ್ಯದಲ್ಲಿ ನನ್ನಿಂದಲೇ ಕೆಲವೊಂದು ತಪ್ಪುಗಳಾಗಿತ್ತು. ಮೊದಲ ಗೇಮ್ ನಲ್ಲೇ ನೋಜೊಮಿಗೆ ನಾನು ಸುಲಭವಾಗಿ ಅಂಕ ನೀಡಿದ್ದೆ. ಆದರೆ ಈ ಬಾರಿ ಹಾಗಾಗಲಾರದು. ಪಂದ್ಯ ಗೆದ್ದುಕೊಳ್ಳುವ ನಿಟ್ಟಿನಲ್ಲಿ ನಾನು ಸಂಪೂರ್ಣ ಗಮನ ಹರಿಸಿ ಆಡಲಿದ್ದೇನೆ' ಎಂದರು.