
ಬ್ಯಾಂಕಾಕ್ನಲ್ಲಿ ನಡೆದ ಥಾಮಸ್ ಕಪ್ ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆದ್ದು ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಅಂತರದಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಇದೇ ಮೊದಲ ಬಾರಿಗೆ ಥಾಮಸ್ ಕಪ್ ಫೈನಲ್ ತಲುಪಿದ್ದ ಸಾಧನೆ ಮಾಡಿತ್ತು. ಸೆಮಿಫೈನಲ್ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸುವ ಮೂಲಕ ಫೈನಲ್ ತಲುಪಿತ್ತು.
14 ಬಾರಿಯ ಥಾಮಸ್ ಕಪ್ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಗೆಲ್ಲುವ ಮೂಲಕ ಭಾರತದ ಪುರುಷರ ತಂಡವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ಭಾರತವು 1979, 1955 ಮತ್ತು 1952 ರಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದೇ ಈ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು.
ಲಕ್ಷ್ಯ ಸೇನ್, ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಕಿಡಂಬಿ ಶ್ರೀಕಾಂತ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದು ಫೈನಲ್ನಲ್ಲಿ ಭಾರತಕ್ಕೆ ಸ್ಮರಣೀಯ ಜಯವನ್ನು ಪಡೆದ ನಂತರ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಟ್ವೀಟ್ ಮಾಡುವ ಮೂಲಕ ನಗದು ಬಹುಮಾನವನ್ನು ಘೋಷಿಸಿದರು.
ಥಾಮಸ್ ಕಪ್ ಗೆದ್ದ ಇಂಡೋನೇಷ್ಯಾ, ಚೀನಾ, ಮಲೇಷ್ಯಾ, ಜಪಾನ್ ಮತ್ತು ಡೆನ್ಮಾರ್ಕ್ ನಂತರ ಭಾರತವು ಥಾಮಸ್ ಕಪ್ ಗೆದ್ದ ಆರನೇ ದೇಶವಾಗಿದೆ.