ಪ್ರವಾಹದಲ್ಲಿ ಈಜಿ ಬಂದು ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಬಾಕ್ಸರ್!

ಬೆಂಗಳೂರು, ಆಗಸ್ಟ್ 12: ಉತ್ತರ ಕರ್ನಾಟಕದಲ್ಲಿ ವರುಣನ ರೌದ್ರಾವತಾರಕ್ಕೆ ಹಲವು ಹಳ್ಳಿಗಳೇ ನೀರಿನಲ್ಲಿ ಮುಳುಗಿವೆ. ಅದರಲ್ಲೂ ಬೆಳಗಾವಿಯ ನೆರೆ ಪೀಡಿತ ಪ್ರದೇಶಗಳಲ್ಲಿ ಮಣ್ಣೂರಿನಲ್ಲೂ ಪ್ರವಾಹದ ಅಬ್ಬರ ಜೋರಾಗಿದೆ. ಹೀಗಿರುವಾಗ ಸಾಧಿಸುವ ಛಲ ಬಿಡದ ಬೆಳಗಾವಿಯ ಯುವ ಬಾಕ್ಸರ್ 19 ವರ್ಷದ ನಿಶಾನ್ ಮನೋಹರ್ ಕದಮ್, ಪ್ರವಾಹದಲ್ಲೇ 2.5 ಕಿ.ಮೀವರೆಗೆ ಈಜಿ ತನ್ನೂರಿನಿಂದ ಹೊರಬಂದು ಬೆಂಗಳೂರು ತಲುಪಿ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡು ಬೆಳ್ಳಿ ಗೆದ್ದ ಅದ್ಭುತ ಸಾಧನೆ ಮೆರೆದಿದ್ದಾನೆ.
ಆಗಸ್ಟ್ 7, ಮನೆಯಾಚೆ ವರುಣನ ಆರ್ಭಟ. ಎತ್ತ ನೋಡಿದರೂ ಬರಿ ನೀರೇ ನೀರು. ಸಂಪೂಣ್ ಗ್ರಾಮವೇ ನೀರಲ್ಲಿ ಮುಳುಗಿದೆ. ಸಾಲದ್ದಕ್ಕೆ ಮೊಸಳೆಗಳ ಕಾಟ. ಹೀಗಿದ್ದರೂ ಆ ಯುವಕನ ಎದೆ ನಡುಗಲಿಲ್ಲ. ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ರೈಲು ಹತ್ತಲೇಬೇಕೆಂಬ ಹಠ ಅವನದ್ದು.
ಮಗನ ತುಡಿತವನ್ನು ಅರಿತ ತಂದೆ ಮನೋಹರ್ ಕದಮ್ ಬಾಕ್ಸಿಂಗ್ ಕಿಟ್ ಎಲ್ಲದಕ್ಕೂ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಮಗನೊಟ್ಟಿಗೆ ನೀರಿಗಿಳಿದು ಈಜಿ ಊರಾಚೆಗಿನ ರಸ್ತೆ ತಲುಪುವ ಸಾಹಸಕ್ಕೆ ಕೈ ಹಾಕಿಯೇಬಿಟ್ಟರು. ಅಪ್ಪ-ಮಗ ಇಬ್ಬರೂ ಸೇರಿ ಧೈರ್ಯ ಮಾಡಿ 45 ನಿಮಿಷಗಳಲ್ಲಿ ಎರಡೂವರೆ ಕಿ.ಮೀ ದೂರವನ್ನು ಈಜಿ ಮುಖ್ಯ ರಸ್ತೆ ತಲುಪುವಲ್ಲಿ ಸಫಲರಾಗಿಯೇಬಿಟ್ಟರು. ಇಷ್ಟೆಲ್ಲಾ ಸಾಹಸಕ್ಕೆ ಫಲವಾಗಿ ಮೂರು ದಿನಗಳ ತರುವಾಯು ನಿಶಾನ್ ರಾಜ್ಯ ಮಟ್ಟದ ಬಾಕ್ಸಿಂಗ್ನ ಲೈಟ್ಫ್ಲೈವೇಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದನು.
"ನಾನು ಈ ಚಾಂಪಿಯನ್ಷಿಪ್ ಸಲುವಾಗಿ ಕಾಯುತ್ತಿದ್ದೆ. ಇದನ್ನು ತಪ್ಪಿಸಿಕೊಳ್ಳಲು ನಾನು ಸಿದ್ದನಿರಲಿಲ್ಲ. ನಮ್ಮ ಗ್ರಾಮ ಸಂಪೂರ್ಣವಾಗಿ ನೀರಿನಿಂದ ಆವರಿಸಿದ್ದ ಕಾರಣ ಯಾವುದೇ ವಾಹನ ಸಂಚಾರ ಇರಲಿಲ್ಲ. ಹೀಗಾಗ ಈಜಿ ಮುಖ್ಯ ರಸ್ತೆ ತಲುಪದೇ ಬೇರೆ ಮಾರ್ಗವಿರಲಿಲ್ಲ. ಅದೃಷ್ಠ ಕೈಕೊಟ್ಟ ಕಾರಣ ಈ ಬಾರಿ ಬೆಳ್ಳಿ ಗೆದಿದ್ದೇನೆ. ಮುಂದಿನ ವರ್ಷ ಖಂಡಿತವಾಗಿ ಚಿನ್ನ ಗೆಲ್ಲುತ್ತೇನೆ," ಎಂದು ನಿಶಾನ್ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
ಬೆಳಗಾವಿಯ ಜ್ಯೋತಿ ಪಿ.ಯು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿರುವ ನಿಶಾನ್, 2 ವರ್ಷಗಳ ಹಿಂದೆ ಬಾಕ್ಸಿಂಗ್ ಆರಂಭಿಸಿದ್ದು, ಅರ್ಜುನ ಪ್ರಶಸ್ತಿ ವಿಜೇತ ಕ್ಯಾಪ್ಟನ್ ಮುಕುಂದ್ ಕಿಲ್ಲೇಕರ್ ಅವರಡಿಯಲ್ಲಿ ಎಂ.ಜಿ ಸ್ಪೋರ್ಟಿಂಗ್ ಅಕಾಡೆಮಿಯಲ್ಲಿ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
"ಪರಿಸ್ಥಿತಿ ಬಹಳ ಗಂಭೀರವಾಗಿರುವ ಕಾರಣ ಪ್ರಯಾಣ ಬೆಳೆಸುವುದು ನಿಜಕ್ಕೂ ಅಪಾಯಕಾರಿ. ಹಲವು ಪೋಷಕರು ಬಾಕ್ಸಿಂಗ್ಗೆ ತಮ್ಮ ಮಕ್ಕಳನ್ನು ಕಳುಹಿಸುವುದನ್ನೇ ನಿಲ್ಲಿಸಿದ್ದಾರೆ. ನಿಶಾನ್ ಕೂಡ ಹಲವು ದಿನಗಳಿಂದ ಅಭ್ಯಾಸಕ್ಕೆ ಆಗಮಿಸಿಲ್ಲ. ಆದರೆ ಚಾಂಪಿಯನ್ಷಿಪ್ ಬಗ್ಗೆ ತಿಳಿದ ಬಳಿಕ ಪಾಲ್ಗೊಳ್ಳಲೇ ಬೇಕೆಂಬ ಹಠತೊಟ್ಟಿದ್ದ. ಈಜಿ ಹತ್ತಿರದ ಮುಖ್ಯರಸ್ತೆಗೆ ಬರುವುದಾಗಿ ಆತ ಹೇಳಿದ್ದ. ಹೀಗಾಗಿ ಆತನಿಗೆ ಮುಖ್ಯರಸ್ತೆ ಬಳಿ ವಾಹನದ ವ್ಯವಸ್ಥೆ ಮಾಡಿದ್ದೆವು," ಎಂದು ಬಾಕ್ಸಿಂಗ್ ತಂಡದ ಮ್ಯಾನೇಜರ್ ಗಜೇಂದ್ರ ಎಸ್ ತ್ರಿಪಾಠಿ ಹೇಳಿದ್ದಾರೆ.
ಸಂಜೆ 3.45ರ ಸುಮಾರಿಗೆ ಮನೆಯಿಂದ ಹೊರಟ ನಿಶಾನ್ ಮತ್ತು ಆತನ ತಂದೆ ಸಂಜೆ 4.30ರ ಸುಮಾರಿಗೆ ಮುಖ್ಯರಸ್ತೆ ತಲುಪಿದ್ದಾರೆ. "ಈ ಎಲ್ಲಾ ಅಡೆತಡೆಗಳ ಮಧ್ಯೆ ನಿಶಾನ್ ಎಲ್ಲಾ ಪಂದ್ಯಗಳಲ್ಲು ಉತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕಾರ್ಯದರ್ಶಿ ಸಾಯ್ ಸತೀಶ್ ಎನ್. ಹೇಳಿದ್ದಾರೆ. ಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 248 ಮಂದಿ ಯುವ ಬಾಕ್ಸರ್ಗಳು ಪಾಲ್ಗೊಂಡಿದ್ದರು. ಆರು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications