
ಹೈದರಾಬಾದ್, ಏಪ್ರಿಲ್ 01: ನಿನ್ನೆ ಹೈದರಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆರ್ಸಿಬಿ ಹೀನಾಯ ಸೋಲು ಕಂಡಿದೆ. ಈ ಸೋಲು ಈವರೆಗಿನ ಅತ್ಯಂತ ಹೀನಾಯ ಸೋಲು ಎಂದು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ.
ಸನ್ರೈಸಸ್ನ ಜಾನಿ ಬೆಸ್ಟೊ ಮತ್ತು ಡೆವಿಡ್ ವಾರ್ನರ್ ಅವರುಗಳು ಹೈದರಾಬಾದ್ ನ ರಾಜೀವ್ಗಾಂಧಿ ಕ್ರೀಡಾಂಗಣದ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಚೆಚ್ಚಿ ಆರ್ಸಿಬಿಯನ್ನು ಹಣ್ಣು ಮಾಡಿದರು. ತಂಡದ ಯಾವ ಹಂತದಲ್ಲಿಯೂ ಸಹ ಆರ್ಸಿಬಿ ತಂಡ ಪುಟಿದೇಳುವ ಸಣ್ಣ ಲಕ್ಷಣವನ್ನೂ ತೋರಲಿಲ್ಲ. ನಿನ್ನೆಯ ಪಂದ್ಯವೂ 2019 ರ ಐಪಿಎಲ್ನಲ್ಲಿ ಆರ್ಸಿಬಿಯ ಮೂರನೇ ಸೋಲಾಗಿದೆ.
ಈ ಸೋಲಿನ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿರುವ ನಾಯಕ ವಿರಾಟ್ ಕೊಹ್ಲಿ, ಅವರು (ಸನ್ರೈಸರ್ಸ್) ಏಕೆ ಚಾಂಪಿಯನ್ ತಂಡ ಎಂಬುದನ್ನು ನಮಗೆ ತೋರಿಸಿಕೊಟ್ಟರು, ನಾವು ಎಲ್ಲ ವಿಭಾಗದಲ್ಲಿ ವಿಫಲರಾದೆವು, ಅವರು ಎಲ್ಲ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು' ಎಂದು ಹೇಳಿದರು.
ಸನ್ಸೈರ್ಸ್ ತಂಡವನ್ನು ಹೊಗಳಿದ ವಿರಾಟ್ ಕೊಹ್ಲಿ, ಹೈದರಾಬಾದ್ ತಂಡ ಚಾಂಪಿಯನ್ ತಂಡ, ಕಳೆದ ಬಾರಿ ಅವರು ಕಪ್ ಗೆದ್ದಿದ್ದಾರೆ, ನಮ್ಮನ್ನು 2016 ರ ಫೈನಲ್ನಲ್ಲಿ ಸೋಲಿಸಿದ್ದರು ಎಂದು ಹೇಳಿದರು.
ವಾರ್ನರ್ ಮತ್ತು ಬ್ರಸ್ಟೋವ್ ಸೆಟ್ ಆದಮೇಲೆ ಅವರ ಜೊತೆಯಾಟ ಮುರಿಯುವುದು ಸಾಧ್ಯವೇ ಆಗಲಿಲ್ಲ, ನಾವು ಮೊದಲ ಎಸೆತದಿಂದಲೂ ಉತ್ತಮ ಆಟ ಆಡಲಿಲ್ಲ, ಕ್ಯಾಚುಗಳನ್ನಾಗಿ ಬದಲಾಯಿಸಿಕೊಳ್ಳಬಹುದಾದ ಅವಕಾಶಗಳು ಕೆಲವು ಬಂದವು ಆದರೆ ಅದರಲ್ಲಿಯೂ ನಾವು ಸೋತೆವು ಎಂದು ಕೊಹ್ಲಿ ಹೇಳಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ನಮ್ಮದು ಇದು ಮೂರನೇ ಪಂದ್ಯ, ಇನ್ನೂ 11 ಪಂದ್ಯವಿದೆ. ಮುಂದಿನ ಪಂದ್ಯ ರಾಜಸ್ಥಾನದ ಮೇಲಿದ್ದು, ಜೈಪುರದ ಪಿಚ್ ನಮ್ಮ ಆಟಕ್ಕೆ ಅನುಕೂಲಕರವಾಗಿರುವ ನಿರೀಕ್ಷೆ ಇದೆ. ಆರ್ಸಿಬಿ ತಂಡವು ತನ್ನ ಮುಂದೆ ತಾನೇ ಹೊಸ ಸವಾಲುಗಳನ್ನು ಇಟ್ಟುಕೊಂಡು ಆಡಬೇಕು ಎಂದು ಕೊಹ್ಲಿ ಹೇಳಿದರು.