ಸೋಮವಾರ, ಆಗಸ್ಟ್ 21ರಂದು ನವದೆಹಲಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭಾರತ ತಂಡದ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂಬರುವ 2023ರ ಏಷ್ಯಾ ಕಪ್ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಇದೇ ವೇಳೆ ಅಕ್ಟೋಬರ್ 5ರಿಂದ ಪ್ರಾರಂಭವಾಗುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ ಎಲ್ಲಾ ಸಂಭಾವ್ಯ ಆಯ್ಕೆಗಳನ್ನು ಪರಿಶೀಲಿಸಲಾಗುತ್ತದೆ.

ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಅಧಿಕೃತವಾಗಿ ಉಪಸ್ಥಿತರಿರುತ್ತಾರೆ ಎನ್ನಲಾಗಿದೆ.
ಈ ಹಿಂದೆ ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಅವರು ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ಸಮಯದಲ್ಲಿ ಆಯ್ಕೆ ಸಭೆಗಳ ಭಾಗವಾಗಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಆದರೆ, ಮುಖ್ಯ ಕೋಚ್ ಎನ್ಎಸ್ಪಿ (ನ್ಯಾಷನಲ್ ಸೆಲೆಕ್ಷನ್ ಪ್ಯಾನೆಲ್)ನ ಭಾಗವಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾದಂತೆ, ಭಾರತದಲ್ಲಿ ಕೋಚ್ ಅಥವಾ ನಾಯಕನಿಗೆ ಮತದಾನದ ಹಕ್ಕನ್ನು ಇಲ್ಲ.

ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಇಬ್ಬರೂ ಪ್ರತ್ಯಕ್ಷವಾಗಿ ಸಭೆಗೆ ಹಾಜರಾಗುತ್ತಾರೆಯೇ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇನ್ನೂ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿಲ್ಲ. ಈ ಹಿನ್ನೆಲೆಯಲ್ಲಿ, ಬಿಸಿಸಿಐ ಆಯ್ಕೆಗಾರರು ಬ್ಯಾಕಪ್ ಆಟಗಾರರನ್ನು ಆಯ್ಕೆ ಮಾಡಬಹುದು. ಶ್ರೀಲಂಕಾದಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಗಳ ವೇಳೆ ಭಾರತದ ಅಗ್ರ ಐದರಿಂದ ಆರು ಕ್ರಮಾಂಕಗಳ ಎಲ್ಲ ಆಟಗಾರರನ್ನು ಪರೀಕ್ಷಿಸಲು ಅವಕಾಶವನ್ನು ನೀಡುತ್ತದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) 2023ರ ಏಷ್ಯಾ ಕಪ್ಗಾಗಿ 17 ಸದಸ್ಯರ ತಂಡಕ್ಕೆ ಅವಕಾಶ ಕಲ್ಪಿಸಿದೆ. ಇದರಂತೆ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ತಂಡಗಳು 17 ಸದಸ್ಯರ ತಂಡವನ್ನು ಆಯ್ಕೆ ಮಾಡಿಕೊಂಡಿವೆ.
""2023ರ ವಿಶ್ವಕಪ್ಗಾಗಿ ತಾತ್ಕಾಲಿಕ 15 ಸದಸ್ಯರ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಇದನ್ನು ಸೆಪ್ಟೆಂಬರ್ 5ರೊಳಗೆ ಸಲ್ಲಿಸಬೇಕಾಗಿದೆ. ಅಂತಿಮ ತಂಡವನ್ನು ಸಲ್ಲಿಸಲು ಸೆಪ್ಟೆಂಬರ್ 27ರ ಗಡುವು ಇರುವುದರಿಂದ, ಒಂದಿಬ್ಬರ ಬದಲಾವಣೆ ಮಾಡಬಹುದು,'' ಎಂದು ಅನಾಮಧೇಯ ಬಿಸಿಸಿಐ ಮೂಲ ತಿಳಿಸಿದೆ.
ಬೆಂಗಳೂರಿನ ಎನ್ಸಿಎಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 38 ಓವರ್ಗಳ ಬ್ಯಾಟಿಂಗ್ ಮತ್ತು 50 ಓವರ್ಗಳ ಫೀಲ್ಡಿಂಗ್ ಮಾಡಿದ್ದರು. ಇನ್ನು ಕೆಎಲ್ ರಾಹುಲ್ ಪೂರ್ಣ ಪ್ರಮಾಣದ ಫಿಟ್ನೆಸ್ ಹೊಂದಿದ್ದಾರೆ ಎಂದು ಈಗಾಗಲೇ ಶುಕ್ರವಾರ ಪಿಟಿಐ ವರದಿ ಮಾಡಿದೆ.
ಎಡಗೈ ಯುವ ಬ್ಯಾಟರ್ ತಿಲಕ್ ವರ್ಮಾ ಅವರ ಬಗ್ಗೆ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಆದರೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಫಿಟ್ ಎಂದು ಪರಿಗಣಿಸಿದರೆ, ಅಂತಿಮ 15ರಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಈ ಇಬ್ಬರು ಅನುಭವಿ ಆಟಗಾರರು ಫಿಟ್ ಆಗಿದ್ದರೆ ಮತ್ತು ಆಯ್ಕೆಗೆ ಲಭ್ಯವಿದ್ದರೆ, ಉತ್ತಮ ಫಿನಿಶಿಂಗ್ ಸಾಮರ್ಥ್ಯ ಹೊಂದಿರುವ ಸೂರ್ಯಕುಮಾರ್ ಯಾದವ್ ಹೆಚ್ಚುವರಿ ಬ್ಯಾಟರ್ ಸ್ಲಾಟ್ ತೆಗೆದುಕೊಳ್ಳಬಹುದು. ಆಗ ಸಂಜು ಸ್ಯಾಮ್ಸನ್ ಅವರು ತಂಡದಿಂದ ಹೊರಬೀಳುವ ಸಾಧ್ಯತೆ ಇದೆ.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರು ಏಕದಿನ ವಿಶ್ವಕಪ್ಗೆ ಚರ್ಚೆಯಲ್ಲಿದೆ. ಆದರೆ, ಟೆಸ್ಟ್ ಸರಣಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಏಕೆ ಪರಿಗಣಿಸಲಿಲ್ಲ ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾರರೊಬ್ಬರು ಪ್ರಶ್ನಿಸಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್, ಫಿಟ್ನೆಸ್ಗೆ ಒಳಪಟ್ಟಿರುತ್ತಾರೆ), ಶ್ರೇಯಸ್ ಅಯ್ಯರ್ (ಫಿಟ್ನೆಸ್ಗೆ ಒಳಪಟ್ಟಿರುತ್ತಾರೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಇಶಾನ್ ಕಿಶನ್ (2ನೇ ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಯುಜ್ವೇಂದ್ರ ಚಾಹಲ್/ ರವಿಚಂದ್ರನ್ ಅಶ್ವಿನ್.