ಗಾಲೆ, ಆಗಸ್ಟ್.15: 112 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡ ಭಾರತ ಹೀನಾಯ ಸೋಲು ಅನುಭವಿಸಿದೆ. ರಂಗನಾ ಹೆರಾತ್ ಸ್ಪಿನ್ ದಾಳಿಗೆ ಮಂಕಾದ ಭಾರತದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.
23 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಶನಿವಾರ ಬ್ಯಾಟಿಂಗ್ ಆರಂಭಿಸಿತು, ಭೋಜನ ವಿರಾಮದ ವೇಳೆಗೆ ಪ್ರಮುಖ ಆಟಗಾರರು ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಹೊರತುಪಡಿಸಿದರೆ ಬೇರೆ ಯಾರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.[ಬ್ಯಾಟಿಂಗ್ ವೈಫಲ್ಯದ ನಡುವೆ ವಿಶ್ವ ದಾಖಲೆ ಬರೆದ ರಹಾನೆ]

ಗೆಲುವವಿಗೆ ಆಧಾರವಾಗಿದ್ದ ರಹಾನೆ ಸಹ ಹೆರಾತ್ ದಾಳಿಗೆ ಸಿಕ್ಕಿ ಪೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ಭಾರತ ಶ್ರೀಲಂಕಾ ವಿರುದ್ಧ ಟೆಸ್ಟ್ ಗೆಲ್ಲುವ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. 176 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ112 ರನ್ ಗೆ ಆಲೌಟ್ ಆಯಿತು.
ಹೆರಾತ್ ಹೀರೋ: 48 ರನ್ ನೀಡಿ 7 ವಿಕೆಟ್ ಕಿತ್ತ ರಂಗನಾ ಹೆರಾತ್ ಶ್ರೀಲಂಕಾ ಪರ ಹೀರೋ ಆಗಿ ಮಿಂಚಿದರು. ಭಾರತದ ಕೈಯಲ್ಲಿದ್ದ ಪಂದ್ಯ ಹೆರಾತ್ ದಾಳಿಗೆ ಸಿಕ್ಕಿ ನಾಟಕೀಯ ಬದಲಾವಣೆಗೊಳಪಟ್ಟಿತು. ಮೊದಲ ಇನಿಂಗ್ಸ್ ನಲ್ಲಿ ಭಾರತ 192 ರನ್ ಗಳ ಲೀಡ್ ಪಡೆದುಕೊಂಡಿತ್ತು. ಆದರೆ ಶ್ರೀಲಂಕಾ ಪರ ಎರಡನೇ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ ಚಂಡಿಮಲ್ ಮತ್ತು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಹೆರಾತ್ ಮತ್ತು ಕುಶಾಲ್ ಪಂದ್ಯವನ್ನು ಕಸಿದುಕೊಂಡರು.
ಎರಡನೇ ಇನಿಂಗ್ಸ್ ನಲ್ಲಿ ಯಾವೊಬ್ಬ ಭಾರತೀಯ ಬ್ಯಾಟ್ಸ್ ಮನ್ ಸಹ ಶ್ರೀಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಅಂಜಿಕ್ಯ ರಹಾನೆ(36) ಮತ್ತು ಶಿಖರ್ ಧವನ್ ಗಳಿಸಿದ (28) ರನ್ ಗಳೇ ಭಾರತದ ಪರ ಅಧಿಕ ಮೊತ್ತ.
ಕೊಲಂಬೋದಲ್ಲಿ ಮುಂದಿನ ಟೆಸ್ಟ್ ಆಗಸ್ಟ್ 20 ರಂದು ಆರಂಭವಾಗಲಿದ್ದು ಭಾರತಮ 0-1 ರ ಹಿನ್ನಡೆ ಕಂಡಿದ್ದು ಮುಂದಿನ ಟೆಸ್ಟ್ ನಲ್ಲಿ ಯಾವ ಗೆಲುವಿನ ಲಯಕ್ಕೆ ಮರಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.