For Quick Alerts
ALLOW NOTIFICATIONS  
For Daily Alerts
 

1983ರ ವಿಶ್ವಕಪ್ ಗೆದ್ದು ಇಂದಿಗೆ 4 ದಶಕ: ಲಾರ್ಡ್ಸ್‌ನಲ್ಲಿ ಕ್ರಿಕೆಟ್ ದೈತ್ಯರನ್ನು ಸೋಲಿಸಿದ ಕಪಿಲ್ ದೇವ್ ಪಡೆ

ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ ಅಂದರೆ, ಜೂನ್ 25, 2023ಕ್ಕೆ 40 ವರ್ಷಗಳು ಕಳೆದಿವೆ.

ಜೂನ್ 25, 1983ರಂದು ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ದೈತ್ಯರೆನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ತಮ್ಮ ಮೊದಲ ಹಾಗೂ ವಿಶ್ವದ ಮೂರನೇ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

40 Years Ago On This Day: Kapil Dev-led Team India Win 1983 World Cup In Lords

ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತದ ಆರಂಭಿಕರಾದ ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಅವರು ಉತ್ತಮ ಆರಂಭ ನೀಡುವ ಮೂಲಕ ಅಡಿಪಾಯ ಹಾಕಿದರು.

ಆದರೆ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೆಲವೇ ರನ್‌ಗಳ ಅಂತರದಲ್ಲಿ ಔಟಾಗುವ ಮೂಲಕ ಭಾರತ ಹಿನ್ನಡೆ ಅನುಭವಿಸಿತು. ಭಾರತ 2 ವಿಕೆಟ್‌ಗೆ 59 ರನ್ ಗಳಿಸಿ ಸಂಕಷ್ಟದಲ್ಲಿತ್ತು.

ಭಾರತ ತಂಡದ ನಾಯಕ ಕಪಿಲ್ ದೇವ್ 15 ರನ್ ಗಳಿಸಿದರು. ಆಲ್‌ರೌಂಡರ್ ಮೊಹಿಂದರ್ ಅಮರನಾಥ್ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರವನ್ನು ನಿರ್ವಹಿಸಿದರು. ಅಮರನಾಥ್ ಬ್ಯಾಟಿಂಗ್‌ನಲ್ಲಿ 26 ರನ್ ಗಳಿಸಿದರೆ, ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ತಮ್ಮ ಐತಿಹಾಸಿಕ ಗೆಲುವಿಗೆ ನೆರವಾದರು.

ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಭಾರತ ತಂಡ 60 ಓವರ್‌ಗಳ ಪಂದ್ಯದಲ್ಲಿ 54.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಆಂಡಿ ರಾಬರ್ಟ್ಸ್ ಮತ್ತು ಮಾಲ್ಕಮ್ ಮಾರ್ಷಲ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೆ ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ತಂಡವೂ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಅವರು ಅತ್ಯುತ್ತಮ ಜೊತೆಯಾಟ ನಿರ್ಮಿಸಿದರು. ಈ ವೇಳೆ ಮೊಹಿಂದರ್ ಅಮರನಾಥ್ ಅವರು ಡೆಸ್ಮಂಡ್ ಹೇನ್ಸ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟ ಮುರಿದರು. ಅನಂತರ ಭಾರತೀಯ ಬೌಲರ್‌ಗಳು ಒತ್ತಡ ಹೇರಲು ಆರಂಭಿಸಿದರು.

ಇನ್ನಿಂಗ್ಸ್‌ನುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಕೇವಲ 12 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಮದನ್ ಲಾಲ್ ಮತ್ತು ಅಮರನಾಥ್ ನೇತೃತ್ವದ ಭಾರತೀಯ ಬೌಲರ್‌ಗಳು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು ಮತ್ತು ನಿಯಮಿತವಾಗಿ ವಿಕೆಟ್ ಪಡೆದರು.

ಈ ವೇಳೆ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ವಿವಿಯನ್ ರಿಚರ್ಡ್ಸ್ ಅವರನ್ನು ಔಟ್ ಮಾಡಲು ಭಾರತದ ನಾಯಕ ಕಪಿಲ್ ದೇವ್ ಅದ್ಭುತ ಕ್ಯಾಚ್ ತೆಗೆದುಕೊಂಡರು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು. ಈ ಕ್ಯಾಚ್ ಭಾರತದ ಪರವಾಗಿ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿತು ಮತ್ತು ವೆಸ್ಟ್ ಇಂಡೀಸ್ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಉರುಳಲು ಪ್ರಾರಂಭಿಸಿತು.

ಕೊನೆಗೆ ವೆಸ್ಟ್ ಇಂಡೀಸ್ 52 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಮೊತ್ತಕ್ಕಿಂತ 43 ರನ್‌ಗಳನ್ನು ಕಡಿಮೆ ಗಳಿಸಿತು. ಫೈನಲ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

1983ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಗೆಲುವು ಒಂದು ಐತಿಹಾಸಿಕ ಸಾಧನೆ ಮತ್ತು ಭಾರತೀಯ ಕ್ರಿಕೆಟ್‌ಗೆ ದೊಡ್ಡ ತಿರುವು ಕೊಟ್ಟ ದಿನವಾಯಿತು. ಇದು ದೇಶದಲ್ಲಿ ಕ್ರಿಕೆಟ್ ಅನ್ನು ಪ್ರೀತಿಸುವವರ ಸಂಖ್ಯೆಯನ್ನು ಹೆಚ್ಚಿಸಿತು.

ಕಪಿಲ್ ದೇವ್ ನಾಯಕತ್ವದ ತಂಡ ಭಾರತ ದೇಶಕ್ಕೆ ತನ್ನ ಮೊದಲ ವಿಶ್ವಕಪ್ ಟ್ರೋಫಿ ಜಯಿಸಿ ಕೊಟ್ಟಿತು. ಅದು ಭಾರತದಲ್ಲಿ ಕ್ರಿಕೆಟ್ ಕ್ರಾಂತಿಗೆ ಕಾರಣವಾಯಿತು. ಅಲ್ಲದೆ, 1983ರ ವಿಶ್ವಕಪ್ ಗೆಲುವು ಹೊಸ ಪೀಳಿಗೆಯ ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡಿತು ಎಂದರೆ ತಪ್ಪಾಗಲಾರದು.

Story first published: Sunday, June 25, 2023, 11:32 [IST]
Other articles published on Jun 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+