ಜೂನ್ 25, 1983 ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಐತಿಹಾಸಿಕ ದಿನ. ಏಕೆಂದರೆ, ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ತಮ್ಮ ಮೊದಲ ವಿಶ್ವಕಪ್ ಟ್ರೋಫಿ ಗೆದ್ದ ಅವಿಸ್ಮರಣೀಯ ದಿನವಾಗಿದೆ.
ಭಾರತ ತಂಡವು 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆಲುವಿನೊಂದಿಗೆ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ ದಿನಕ್ಕೆ ಇದೀಗ 40 ವರ್ಷಗಳು ಸಂದಿವೆ. ಇದೇ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು 1983ರ ವಿಶ್ವಕಪ್ ಗೆಲುವಿನ 40ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.

ಜೂನ್ 25, 1983ರಂದು ಲಂಡನ್ನ ಲಾರ್ಡ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯ ಫೇವರಿಟ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಸಾಮರ್ಥ್ಯ ತೋರಿಸಿಕೊಟ್ಟಿತು.
60 ಓವರ್ಗಳ ಪಂದ್ಯದಲ್ಲಿ ಭಾರತ ತಂಡ 54.4 ಓವರ್ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಆಂಡಿ ರಾಬರ್ಟ್ಸ್ ಮತ್ತು ಮಾಲ್ಕಮ್ ಮಾರ್ಷಲ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಪ್ರತ್ಯುತ್ತರವಾಗಿ, ವೆಸ್ಟ್ ಇಂಡೀಸ್ ತಂಡ 52 ಓವರ್ಗಳಲ್ಲಿ 140 ರನ್ಗಳಿಗೆ ಸರ್ವಪತನ ಕಂಡಿತು. ಮೊಹಿಂದರ್ ಅಮರನಾಥ್ ಕೇವಲ 12 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದರು ಮತ್ತು 43 ರನ್ಗಳಿಂದ ಗೆದ್ದು ಬೀಗಿದರು.

ಕಪಿಲ್ ದೇವ್ (ನಾಯಕ) - ಹರ್ಯಾಣ
ಮೊಹಿಂದರ್ ಅಮರನಾಥ್ (ಉಪನಾಯಕ) - ದೆಹಲಿ
ಕೀರ್ತಿ ಅಜಾದ್ - ದೆಹಲಿ
ರೋಜರ್ ಬಿನ್ನಿ - ಕರ್ನಾಟಕ
ಸುನಿಲ್ ಗವಾಸ್ಕರ್ - ಮುಂಬೈ
ಸೈಯ್ಯದ್ ಕೀರ್ಮಾನಿ (ವಿಕೆಟ್ ಕೀಪರ್) - ಕರ್ನಾಟಕ
ಎಸ್ ಮದನ್ಲಾಲ್ - ದೆಹಲಿ
ಸಂದೀಪ್ ಪಾಟೀಲ್ - ಮುಂಬೈ
ಬಿ.ಎಸ್. ಸಂಧು - ಮುಂಬೈ
ಕೃಷ್ಣಮಾಚಾರಿ ಶ್ರೀಕಾಂತ್ - ತಮಿಳುನಾಡು
ರವಿಶಾಸ್ತ್ರಿ - ಮುಂಬೈ
ಯಶ್ಪಾಲ್ ಶರ್ಮಾ - ಪಂಜಾಬ್
ದಿಲೀಪ್ ವೆಂಗ್ಸರ್ಕರ್ - ಮುಂಬೈ
ಸುನಿಲ್ ವಲ್ಸನ್ - ದೆಹಲಿ
ಇನ್ನು ಶನಿವಾರ, ಜೂನ್ 24ರಂದು 1983ರ ವಿಶ್ವಕಪ್ ವಿಜೇತ ದಿನವನ್ನು ಆಚರಿಸಲು ಭಾರತ ತಂಡದ ಅಂದಿನ ಸದಸ್ಯರನ್ನು ಸನ್ಮಾನಿಸಲು ಉದ್ಯಮಿ ಗೌತಮ್ ಅದಾನಿ ಅಹಮದಾಬಾದ್ನಲ್ಲಿ ಸಮಾರಂಭ ಆಯೋಜಿಸಿದ್ದರು.
ಭಾರತದಲ್ಲಿಯೇ ನಡೆಯುವ 2023ರ ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ ಪ್ರಸ್ತುತ ಭಾರತ ತಂಡವನ್ನು ಬೆಂಬಲಿಸಲು ಮತ್ತು ಪ್ರೇರೇಪಿಸಲು 'ಜೀತೇಂಗೆ ಹಮ್' ಘೋಷಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರುಗಳು ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಸಂದೇಶ ರವಾನಿಸಿದರು.
"ಪ್ರಸ್ತುತ ತಂಡದಲ್ಲಿ ಸಾಮೂಹಿಕ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕು ಮತ್ತು ವೈಯಕ್ತಿಕ ಶ್ರೇಷ್ಠತೆಯನ್ನು ಮುಂದುವರಿಸಲು ಸಮರ್ಪಣೆಯ ಮೇಲೆ ಕೇಂದ್ರೀಕರಿಸಲು," ಮಾಜಿ ನಾಯಕ ಕಪಿಲ್ ದೇವ್ ಸಲಹೆ ನೀಡಿದರು.
1983ರ ವಿಶ್ವಕಪ್ ವಿಜೇತ ಭಾರತ ತಂಡವು ದೃಢಸಂಕಲ್ಪ ಮತ್ತು ಟೀಮ್ ಸ್ಪಿರಿಟ್ನಿಂದ ತುಂಬಿತ್ತು ಮತ್ತು 2023ರ ವಿಶ್ವಕಪ್ನಲ್ಲಿ ಪ್ರಸ್ತುತ ತಂಡವನ್ನು ಬೆಂಬಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅಭಿಮಾನಿಗಳನ್ನು ವಿನಂತಿಸಿದರು.
"1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವುದು ಅದೃಷ್ಟ. ಅದು ಟೀಮ್ ಸ್ಪಿರಿಟ್ ಮನೋಭಾವದಿಂದ ಕೂಡಿದ್ದ ನಂಬಲಾಗದ ಪ್ರಯಾಣವಾಗಿತ್ತು. ಮತ್ತೆ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಮರಳಿ ತರಲು ನಮ್ಮ ಪ್ರಸ್ತುತ ತಂಡದ ಸಾಮರ್ಥ್ಯವನ್ನು ನಾವು ನಂಬುತ್ತೇವೆ. ನಾವು ಅಭಿಮಾನಿಗಳಾಗಿ ಒಂದಾಗೋಣ ಮತ್ತು ಇತಿಹಾಸವನ್ನು ರಚಿಸಲು ಅವರನ್ನು ಪ್ರೇರೇಪಿಸೋಣ," ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.