
ನವದೆಹಲಿ, ಜನವರಿ 4: ಶ್ರೀಲಂಕಾದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಜಂಟಲ್ಮನ್ಗಳ ಆಟ ಎಂದು ಕರೆಯಲ್ಪಟಡುವ ಕ್ರಿಕೆಟ್ನಲ್ಲಿ ಐತಿಹಾಸಿಕ ವಿಶ್ವದಾಖಲೆ ಬರೆಯಹೊರಟಿದ್ದು 12 ವರ್ಷಗಳ ಹಿಂದೆ ಜನವರಿ 4ರ ಇದೇ ದಿನ. ಅಂದು ಮುರಳೀಧರನ್ ಕೂಡ ಅಪರೂಪದ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರನಾಗಿ ಗುರುತಿಸಿಕೊಳ್ಳುವುದರಲ್ಲಿದ್ದರು.
ಶ್ರೀಲಂಕಾಕ್ಕೆ ಪ್ರವಾಸ ಕೈಗೊಂಡಿದ್ದ ಜಿಂಬಾಬ್ವೆ ತಂಡ 2002ರ ಜನವರಿ 4ರಂದು ಕ್ಯಾಂಡಿ ಮೈದಾನದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಾಟಕ್ಕಿಳಿದಿತ್ತು. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿದ್ದ ಜಿಂಬಾಬ್ವೆಯ 9 ವಿಕೆಟ್ ಗಳನ್ನೂ ಮುರಳೀಧರನ್ ಉರುಳಿಸಿದ್ದರು. ಆದರೆ ಉಳಿದ ಒಂದೇ ಒಂದು ವಿಕೆಟ್ ಚಮಿಂಡ ವಾಸ್ ಪಾಲಾಗಿತ್ತು.
ಅಂದು ಜಿಂಬಾಬ್ವೆಯ ಮೊದಲ ಇನ್ನಿಂಗ್ಸ್ನಲ್ಲಿ ಮುರಳೀಧರನ್ ಅವರು ಡೌಗೀ ಮೇರಿಲಿಯರ್, ಹೀತ್ ಸ್ಟ್ರೀಕ್, ಕ್ರೈಗ್ ವಿಶಾರ್ಟ್, ಗ್ರಾಂಟ್ ಫ್ಲವರ್, ಆಂಡಿ ಫ್ಲವರ್, ಗೇವಿನ್ ರೆನ್ನಿ, ಸ್ಟುವರ್ಟ್ ಕಾರ್ಲಿಸ್ಲೆ, ಟ್ರೆವರ್ ಗ್ರಿಪ್ಪರ್, ಹ್ಯಾಮಿಲ್ಟನ್ ಮಸಾಕಡ್ಜಾ ಹೀಗೆ 51 ರನ್ನಿಗೆ 9 ವಿಕೆಟ್ಗಳನ್ನು ಕೆಡವಿದ್ದರು. ಆದರೆ ಹೆನ್ರಿ ಓಲೋಂಗ ಅವರ ಕೊನೆಯ ವಿಕೆಟ್ ಮಾತ್ರ ವಾಸ್ ಗೆ ಲಭಿಸಿತ್ತು.
ಒಂದು ವೇಳೆ ಎಲ್ಲಾ 10 ವಿಕೆಟ್ ಗಳು ಅಂದು ಮುತ್ತಯ್ಯ ಪಾಲಾಗಿದ್ದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಎಲ್ಲಾ ವಿಕೆಟ್ ಕೆಡವಿದ ವಿಶ್ವದ ಮೂರನೇ ಸಾಧಕನಾಗಿ ಮುರಳೀಧರನ್ ಕೂಡ ಜಿಮ್ ಲೇಕರ್ (ಇಂಗ್ಲೆಂಡ್) ಮತ್ತು ಭಾರತದ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಸಾಲಲ್ಲಿ ಸೇರಿಕೊಳ್ಳುತ್ತಿದ್ದರು.
ಆ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ ಆಡದೆಯೇ ಶ್ರೀಲಂಕಾ 94 ರನ್ ಜಯ ಸಾಧಿಸಿತ್ತು. ಜಿಂಬಾಬ್ವೆ 236+175 ರನ್ ಗಳಿಸಿದ್ದರೆ, ಶ್ರೀಲಂಕಾ ಒಂದೇ ಇನ್ನಿಂಗ್ಸ್ನಲ್ಲಿ 505 ರನ್ ಗಳಿಸಿತ್ತು. ಅಪ್ರತಿಮ ಬೌಲಿಂಗ್ ಸಾಧನೆ ತೋರಿದ್ದ ಮುತ್ತಯ್ಯ ಪಂದ್ಯಶ್ರೇಷ್ಠರೆನಿಸಿದ್ದರು.