ಐಪಿಎಲ್ನಲ್ಲಿ ಮಿಂಚಿದರೂ ಇಲ್ಲ ಬೆಲೆ: ಈ ಐವರಿಗೆ ಟೀಮ್ ಇಂಡಿಯಾ ಅವಕಾಶ ನೀಡದೇ ಕಡೆಗಣಿಸಿದ ಬಿಸಿಸಿಐ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಬಿಸಿಸಿಐ ಮುಂದಿನ ತಿಂಗಳು ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾನ್ನು ಪ್ರಕಟಿಸಿದೆ. ಹೌದು, ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯ ನಡೆದ ಮೇ 22ರ ಭಾನುವಾರದಂದು 18 ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದ್ದು, ಕೆಲ ಆಟಗಾರರು ಅನೇಕ ಸಮಯದ ನಂತರ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರೆ, ಇನ್ನೂ ಕೆಲ ನೂತನ ಆಟಗಾರರು ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪ್ರತಿನಿಧಿಸಲು ಅವಕಾಶ ಪಡೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು, ಜೂನ್ 9ರಿಂದ ನಡೆಯಲಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಡಲಿದೆ. ಇನ್ನು ಈ ಸರಣಿಗಾಗಿ ಪ್ರಕಟಗೊಂಡಿರುವ ಭಾರತ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದು, ಹಲವು ಆಟಗಾರರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಇನ್ನು ಈ ತಂಡದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅವಕಾಶ ಪಡೆದುಕೊಂಡರೆ, ಇನ್ನೂ ಕೆಲ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಅರ್ಹತೆಯನ್ನು ಹೊಂದಿದ್ದ ಐವರು ಆಟಗಾರರಿಗೆ ಈ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗೆ ಸರಿಯಾದ ಅವಕಾಶ ಸಿಗದೇ ಇರುವ ಆ ಐವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ರಾಹುಲ್ ತ್ರಿಪಾಠಿ
ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್ ಟೂರ್ನಿ ಮಾತ್ರವಲ್ಲದೇ ಕಳೆದ ಮೂರ್ನಾಲ್ಕು ಐಪಿಎಲ್ ಆವೃತ್ತಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಸಮಯದಲ್ಲಿ ಹಲವು ಯುವ ಕ್ರಿಕೆಟಗರಿಗೆ ತಂಡದಲ್ಲಿ ಸ್ಥಾನ ನೀಡಿದ ಬಿಸಿಸಿಐ ಸನ್ ರೈಸರ್ಸ್ ತಂಡದ ಈ ಆಟಗಾರನಿಗೆ ಅವಕಾಶ ನೀಡಿಲ್ಲ. ಟಿ ಟ್ವೆಂಟಿ ಕ್ರಿಕೆಟ್ಗೆ ಬೇಕಿರುವ ಸ್ಪೋಟಕ ಆಟವನ್ನಾಡುವ ಸಾಮರ್ಥ್ಯವಿರುವ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಿದ್ದರೆ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಜೊತೆ ಸೇರಿ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಇನ್ನು ಈ ಬಾರಿಯ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿರುವ ರಾಹುಲ್ ತ್ರಿಪಾಠಿ 413 ರನ್ ಕಲೆಹಾಕಿ ಮೂರು ಬಾರಿ ಅರ್ಧಶತಕವನ್ನೂ ಸಹ ಬಾರಿಸಿದ್ದಾರೆ. ಹೀಗೆ ಸಾಲು ಸಾಲು ಆವೃತ್ತಿಗಳಲ್ಲಿ ಮಿಂಚಿರುವ ರಾಹುಲ್ ತ್ರಿಪಾಠಿಗೆ ಅವಕಾಶ ಸಿಗದಿರುವುದು ಬೇಸರದ ಸಂಗತಿಯೇ ಸರಿ.

2. ಶಿಖರ್ ಧವನ್
ತಾನು ಪ್ರತಿನಿಧಿಸುವ ತಂಡಗಳ ಪರ ನಿರಂತರ ಉತ್ತಮ ಪ್ರದರ್ಶನ ನೀಡುವ ಆಟಗಾರನಾಗಿರುವ ಶಿಖರ್ ಧವನ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದು 400ಕ್ಕಿಂತಲೂ ಹೆಚ್ಚು ರನ್ ಕಲೆಹಾಕಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿದರೂ ಸಹ ಶಿಖರ್ ಧವನ್ಗೆ ಅವಕಾಶ ಸಿಗದೇ ಇರುವುದು ಸದ್ಯ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇನ್ನು ಟೀಮ್ ಇಂಡಿಯಾ ಕೊನೆಯದಾಗಿ ಗೆದ್ದಿದ್ದ ಐಸಿಸಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಶಿಖರ್ ಧವನ್ 2015 ಮತ್ತು 2019ರ ವಿಶ್ವಕಪ್ ಟೂರ್ನಿಗಳಲ್ಲಿ ಶತಕಗಳನ್ನೂ ಸಹ ಬಾರಿಸಿದ್ದರು. ಹೀಗೆ ಉತ್ತಮ ಪ್ರದರ್ಶನ ನೀಡಿದ್ದರೂ ಶಿಖರ್ ಧವನ್ ಅವರನ್ನು ಬಿಸಿಸಿಐ ಹೇಗೆ ಕಡೆಗಣಿಸಿತು ಎಂಬುದು ಸದ್ಯ ದೊಡ್ಡ ಪ್ರಶ್ನೆಯಾಗಿದೆ.

3. ಮೊಹ್ಸಿನ್ ಖಾನ್
ಈ ಬಾರಿಯ ಇಂಡಿಯನ್ ಪ್ರೀಮಿಯರ ಲೀಗ್ ಟೂರ್ನಿಯಲ್ಲಿ ಮಿಂಚಿ ಗಮನ ಸೆಳೆದ ಪ್ರತಿಭೆ ಮೊಹ್ಸಿನ್ ಖಾನ್ಗೂ ಸಹ ಅವಕಾಶ ಸಿಕ್ಕಿಲ್ಲ. ಇನ್ನು ಜಹೀರ್ ಖಾನ್ ನಿರ್ಗಮನದ ನಂತರ ಒಬ್ಬ ಒಳ್ಳೆಯ ಎಡಗೈ ವೇಗಿಗಾಗಿ ಸತತ ಹುಡುಕಾಟದಲ್ಲಿರುವ ಟೀಮ್ ಇಂಡಿಯಾ ಈತನನ್ನು ಉಪಯೋಗಿಸಿಕೊಳ್ಳದೇ ಕಡೆಗಣಿಸಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 8 ಪಂದ್ಯಗಳನ್ನಾಡಿದ ಮೊಹ್ಸಿನ್ ಖಾನ್ 13 ವಿಕೆಟ್ಗಳನ್ನು ಪಡೆದಿದ್ದು, 6ಕ್ಕಿಂತ ಕಡಿಮೆ ಎಕಾನೆಮಿಯಲ್ಲಿ ರನ್ ನೀಡಿದ್ದಾರೆ. ಹೀಗೆ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದರೂ ಸಹ ಮೊಹ್ಸಿನ್ ಖಾನ್ಗೆ ಅವಕಾಶ ಲಭೀಸದೇ ಇರುವುದು ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

4. ತಿಲಕ್ ವರ್ಮಾ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ತಂಡದ ಪರ ಮಿಂಚಿ ಬೆಳಕಿಗೆ ಬಂದ ಪ್ರತಿಭೆ ಎಂದತೆ ಅದು ತಿಲಕ್ ವರ್ಮಾ. ಈ ಬಾರಿಯ ಟೂರ್ನಿಯಲ್ಲಿ ಸತತ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿರುವ ತಿಲಕ್ ವರ್ಮಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಅವಕಾಶ ನೀಡದೇ ಇರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

5. ಟಿ ನಟರಾಜನ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡು, ಮೂರೂ ಮಾದರಿಯ ಕ್ರಿಕೆಟ್ನಲ್ಲೂ ಭಾರತ ತಂಡದ ಪರ ಕಣಕ್ಕಿಳಿದಿದ್ದ ಟಿ ನಟರಾಜನ್ ಮಂಡಿ ಗಾಯಕ್ಕೊಳಗಾಗಿ ಟೀಮ್ ಇಂಡಿಯಾದಿಂದ ಅವಕಾಶ ಕಳೆದುಕೊಂಡಿದ್ದರು. ಆದರೆ, ಇದೀಗ ಗಾಯದ ಸಮಸ್ಯೆಯಿಂದ ಟಿ ನಟರಾಜನ್ ಸುಧಾರಿಸಿಕೊಂಡಿದ್ದರೂ ಸಹ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದೇ ನಿರಾಸೆಗೆ ಒಳಗಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications