ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಮೂರು ಮಾದರಿಯಲ್ಲಿಯೂ ಸರಣಿಯನ್ನಾಡಲು ಸಿದ್ಧತೆ ನಡೆಸುತ್ತಿದೆ. ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಈ ಮೊದಲೇ ತಂಡವನ್ನು ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಬುಧವಾರ ಐದು ಪಂದ್ಯಗಳ ಟಿ20 ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆ ಮಂಡಳಿಯ ನೂತನ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಈ ತಂಡವನ್ನು ಆಯ್ಕೆ ಮಾಡಲಾಗಿದ್ದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ಹೊರಗಿಟ್ಟು ತಂಡವನ್ನು ಪ್ರಕಟಿಸಲಾಗಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಐಪಿಎಲ್ನಲ್ಲಿ ಮಿಂಚಿದ ಕೆಲ ಯುವ ಪ್ರತಿಭಾವಂತ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕೆಲ ಯುವ ಆಟಗಾರರಿಗೆ ಈ ಅವಕಾಶ ದೊರೆತಿದ್ದರೂ ಇನ್ನೂ ಕೆಲ ಪ್ರತಿಭಾವಂತ ಆಟಗಾರರು ಈ ಸರಣಿಯಲ್ಲಿ ಆಡುವ ಅರ್ಹತೆಯಿದ್ದರೂ ನಿರಾಸೆ ಅನುಭವಿಸಿದ್ದಾರೆ. ಅಂಥಾ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಸುದೀರ್ಘ ಸಮಯದ ಬಳಿಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಮ್ಯಾಚ್ ಫಿನಿಷ್ ಮಾಡುವ ಸಾಮರ್ಥ್ಯ ಹೊಂದಿರುವ ಹಾಗೂ ಅದ್ಭುತ ಫೀಲ್ಡಿಂಗ್ ಮಾಡಬಲ್ಲ ಆಟಗಾರನೊಬ್ಬ ದೊರೆತಿದ್ದಾನೆ. ಅದು ಬೇರೆ ಯಾರೂ ಅಲ್ಲ ರಿಂಕು ಸಿಂಗ್. ಸಿಕ್ಸರ್ಗಳನ್ನು ಬಾರಿಸುವ ಸಾಮರ್ಥ್ಯವಿರುವ ರಿಂಕು ಸಿಂಗ್ ಐಪಿಎಲ್ನಲ್ಲಿ ಮ್ಯಾಚ್ ಫಿನಿಷರ್ ಎನಿಸಿಕೊಂಡಿದ್ದರು. ರಿಂಕು ಸಿಂಗ್ ರೀತಿಯ ಆಟಗಾರರು ದೊರೆಯುವುದು ಬಹಳ ಅಪರೂಪ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಅವರಿಗೆ ಅವಕಾಶ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ.
ಟೀಮ್ ಇಂಡಿಯಾ ಚುಟುಕು ಮಾದರಿಯಲ್ಲಿ ಫಿನಿಷರ್ಗಳ ಕೊರತೆಯಿದೆ. ರಾಹುಲ್ ತೆವಾಟಿಯಾ ಅವರಂಥಾ ಆಟಗಾರ ಐಪಿಎಲ್ನಲ್ಲಿ ಫಿನಿಷರ್ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿರುವ ಆಟಗಾರ. ಬ್ಯಾಟಿಂಗ್ ಮಾತ್ರವಲ್ಲದೆ ಸ್ಪಿನ್ ಬೌಲಿಂಗ್ ಮೂಲಕವೂ ಎದುರಾಳಿಗೆ ಸವಾಲೆಸೆಯಬಲ್ಲ ಆಟಗಾರ ತೆವಾಟಿಯಾ. ವಿಂಡೀಸ್ ಪ್ರವಾಸದಲ್ಲಿ ಅವಕಾಶ ದೊರೆತರೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯೊಂದು ದೊರೆತಂತಾಗುತ್ತಿತ್ತು.
ಈ ಪಟ್ಟಿಯಲ್ಲಿರುವ ಮತ್ತೋರ್ವ ಗುಜರಾತ್ ಟೈಟನ್ಸ್ ತಂಡದ ಆಟಗಾರ ಮೋಹಿತ್ ಶರ್ಮಾ. ಕಳೆದ ಆವೃತ್ತಿಯಲ್ಲಿ ಮೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದು ಡೆತ್ ಓವರ್ನಲ್ಲಿ ತಂಡಕ್ಕೆ ದೊಡ್ಡ ಬಲ ನೀಡಿದ್ದರು. ಮೋಹಿತ್ ಶರ್ಮಾ ಅವರ ಬೌಲಿಂಗ್ನಲ್ಲಿರುವ ಏರಿಳಿತಗಳು ವೆಸ್ಟ್ ಇಂಡೀಸ್ ದಾಂಡಿಗರಿಗೆ ಕಂಟಕವಾಗುತ್ತಿತ್ತು. ಆದರೆ ಟೀಮ್ ಇಂಡಿಯಾಗೆ ಸುದೀರ್ಘ ಕಾಳದ ಬಳಿಕ ಕಮ್ಬ್ಯಾಕ್ ಮಾಡುವ ಅವಕಾಶವನ್ನು ಮೋಹಿತ್ ಶರ್ಮಾ ಈ ಸರಣಿಯಲ್ಲಿ ಕಳೆದುಕೊಂಡಿದ್ದಾರೆ.
ಐಪಿಎಲ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರೂ ಋತುರಾಜ್ ಗಾಯಕ್ವಾಡ್ಗೆ ಟಿ20 ತಂಡದಲ್ಲಿ ಯಾಕೆ ಅವಕಾಶ ದೊರೆತಿಲ್ಲ ಎಂಬುದು ಬಹುತೇಕರಿಗೆ ಅಚ್ಚರಿ ಮೂಡಿಸಿದೆ. ಋತುರಾಜ್ ವೆಸ್ಟ್ ಇಂಡಿಸ್ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಗಳಿಗೂ ಆಯ್ಕೆಯಾಗಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿ ಅವರಿಗೆ ಅವಕಾಶ ದೊರೆತಿಲ್ಲ. ಟಿ20 ತಂಡದಲ್ಲಿ ಋತುರಾಜ್ ಗಾಯಕ್ವಾಡ್ ಬದಲಿಗೆ ಯಶಸ್ವಿ ಜೈಸ್ವಾಲ್ಗೆ ಅವಕಾಶ ನೀಡಿದೆ ಆಯ್ಕೆ ಸಮಿತಿ.
ಐಪಿಎಲ 2023ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿ ಗಮನ ಸೆಳೆಯುವಂತಾ ಪ್ರದರ್ಶನ ನೀಡಿದ ಬೌಲರ್ ವರುಣ್ ಚಕ್ರವರ್ತಿ. ಈ ಬಾರಿಯ ಆವೃತ್ತಿಯಲ್ಲಿ ವರುಣ್ ಬೌಲಿಂಗ್ನಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಂಡಿರುವುದನ್ನು ಕ್ರಿಕೆಟ್ ಪಂಡಿತರು ಕೂಡ ಉಲ್ಲೇಖಿಸಿದ್ದಾರೆ. 2021ರ ಟಿ29 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಅವಕಾಶ ನೀಡಲಾಗಿತ್ತಾದರೂ ಅದಾದ ಬಳಿಕ ಅವರಿಗೆ ಒಂದೇ ಒಂದು ಅವಕಾಶ ಭಾರತ ತಂಡದಲ್ಲಿ ದೊರೆತಿಲ್ಲ. ವರುಣ್ ಚಕ್ರವರ್ತಿಯಂಥಾ ಆಟಗಾರ ಟಿ20 ಮಾದರಿಯಲ್ಲಿ ಭಾರತ ತಂಡಕ್ಕೆ ಅಸ್ತ್ರವಾಗಬಲ್ಲರು.