ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಸರಣಿಯ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದರೂ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಅವರ ಒಂದು ನಡೆ ಈಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಪಂಡಿತರು ಕೂಡ ಈ ವಿಚಾರವಾಗಿ ಹಾರ್ದಿಕ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಿದ್ದು ಸೂರ್ಯಕುಮಾರ್ ಯಾದವ್. ಆದರೆ ಅವರಿಗೆ ಅದ್ಭುತವಾಗಿ ಸಾಥ್ ನೀಡಿದ ಆಟಗಾರ ಯುವ ಕ್ರಿಕೆಟಿಗ ತಿಲಕ್ ವರ್ಮಾ. ಸರಣಿಯ ಎರಡನೇ ಪಂದ್ಯದಲ್ಲಿ ಅದ್ಭುತ ಅರ್ಧ ಶತಕ ಸಿಡಿಸಿದ್ದ ತಿಲಕ್ ವರ್ಮಾ ಈ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಅಜೇಯವಾಗುಳಿದು 49 ರನ್ಗಳನ್ನು ಗಳಿಸಿದ್ದರು, ಈ ಮೂಲಕ ಮೂರನೇ ಪಂದ್ಯದಲ್ಲಿ ಎರಡನೇ ಅರ್ಧ ಶತಕ ಸಿಡಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡರು ತಿಲಕ್ ವರ್ಮಾ.

ಆದರೆ ಹಾರ್ದಿಕ್ ಪಾಂಡ್ಯ ತಿಲಕ್ ವರ್ಮಾ ಅವರಿಗಿದ್ದ ಈ ಅವಕಾಶವನ್ನು ತಪ್ಪುವಂತೆ ಮಾಡಿದರು. ಇದು ಈಗ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ ಚೋಪ್ರ ಕೂಡ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ದ್ವಿಪಕ್ಷೀಯ ಸರಣಿ ಇದಾಗಿರುವ ಕಾರಣ ನೆಟ್ರನ್ರೇಟ್ ಅಗತ್ಯವಿಲ್ಲದಿದ್ದಾಗಲೂ ಹಾರ್ದಿಕ್ ಪಾಂಡ್ಯ ಯುವ ಆಟಗಾರನಿಗೆ ಅರ್ಧ ಶತಕ ಸಿಡಿಸಲು ಅವಕಾಶ ನೀಡದೆ ಸಿಕ್ಸರ್ ಸಿಡಿಸಿರುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.
"ಹಾರ್ದಿಕ್ ಬ್ಯಾಟಿಂಗ್ಗೆ ಇಳಿದರು. ಇದು ಬಹಳ ಕುತೂಹಲಕಾರಿಯಾಗಿದೆ. ತಿಲಕ್ ವರ್ಮಾಗೆ ಅವರು ಮೊದಲಿಗೆ ವಿಕೆಟ್ ಕಳೆದುಕೊಳ್ಳದೆ ಉಳಿಯುವುದು ಬಹಳ ಮುಖ್ಯ, ವಿಕೆಟ್ ಕೈಚೆಲ್ಲಬೇಡಾ ಎಂದು ಸೂಚನೆ ನೀಡಿದರು. ಅದಾದ ಬಳಿಕ ಅವರೇ ದೊಡ್ಡ ಹೊಡೆತಕ್ಕೆ ಮುಂದಾದರು. ಇಲ್ಲಿ ನಿಮಗೆ ನೆಟ್ ರನ್ರೇಟ್ನ ಅಗತ್ಯವಿರಲಿಲ್ಲ. ಅದೇನು ದೊಡ್ಡ ವ್ಯತ್ಯಾಸವನ್ನು ಕುಡ ಮಾಡುತ್ತಿರಲಿಲ್ಲ. ತಿಲಕ್ಗೆ ಅವರು ತಳ್ಮೆಯಿಂದ ಆಡುವಂತೆ ತಿಳಿಸಿದರು ಮತ್ತು ಆತ ದೊಡ್ಡ ಹೊಡೆತವನ್ನು ಬಾರಿಸಿದರು. ನಿಮಗೆ ಅಲ್ಲಿ 13 ಎಸೆತಗಳಲ್ಲಿ 2 ರನ್ಗಳ ಅಗತ್ಯವಿತ್ತು. ಆತ ಸಿಂಗಲ್ ಬಾರಿಸಿ ತಿಲಕ್ಗೆ ಅವಕಾಶ ನೀಡಬಹುದಾಗಿತ್ತು. ಆದರೆ ಆತ ಸಿಕ್ಸರ್ ಬಾರಿಸಿದರು" ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 44 ಎಸೆತಗಳಲ್ಲಿ 83 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಕೂಡ ಒಳಗೊಂಡಿತ್ತು. ಇನ್ನು ತಿಲಕ್ ವರ್ಮಾ ಕೊನೆಯವರೆಗೂ ಔಟಾಗದೆ ಉಳಿದಿದ್ದು 37 ಎಸೆತಗಳಲ್ಲಿ 49 ರನ್ಗಳನ್ನು ಬಾರಿಸಿ ಅಜೇಯವಾಗುಳಿದರು.
ಅಂತಿಮ ಹಂತದಲ್ಲಿ ಭಾರತ ತಂಡದ ಗೆಲುವಿಗೆ 2 ರನ್ಗಳ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯ ಸ್ಟ್ರೈಕ್ ಪಡೆದುಕೊಂಡಿದ್ದರು. ಇನ್ನೂ 14 ಎಸೆತಗಳು ಬಾಕಿಯಿರುವ ಕಾರಣ ಹಾರ್ದಿಕ್ ಪಾಂಡ್ಯ ಒಂದು ರನ್ ಬಾರಿಸಿ ತಿಲಕ್ ವರ್ಮಾ ಅರ್ಧ ಶತಕ ಪೂರ್ತಿಗೊಳಿಸಲು ಅವಕಾಶ ನೀಡುತ್ತಾರೆ ಎಂದು ಬಹುತೇಕ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಆ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು.