
ಬಾರ್ಡರ್ ಗವಾಸ್ಕರ್ ಟ್ರೋಫಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಆಸ್ಟ್ರೇಲಿಯಾದ ಸ್ಟಾರ್ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ವಿಶ್ವದಾದ್ಯಂತ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭಾರತದಲ್ಲಿ ಅನುಭವಿಸಿರುವ ವೈಫಲ್ಯದ ಬಗ್ಗೆ ಆಕಾಶ್ ಚೋಪ್ರ ವಿಶ್ಲೇಷಣೆ ಮಾಡಿದ್ದು ಈ ವೈಫಲ್ಯಕ್ಕೆ ಕಾರಣ ನೀಡಿದ್ದಾರೆ.
ಡೇವಿಡ್ ವಾರ್ನರ್ ಸದ್ಯ ಅದ್ಭುತ ಫಾರ್ಮ್ನಲ್ಲಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ನಲ್ಲಿನ ಹುಳುಕು ಹೇಳಿರುವ ಆಕಾಶ್ ಚೋಪ್ರ, ಫೂಟ್ವರ್ಕ್ನಲ್ಲಿನ ಕೊರತೆ ಹಾಗೂ ಚೆಂಡಿನತ್ತ ಕೈಯನ್ನು ಎಸೆಯುವುದು ಭಾರತದ ಪಿಚ್ನಲ್ಲಿ ವಾರ್ನರ್ ವೈಫಲ್ಯ ಅನುಭವಿಸಲು ಕಾರಣ ಎಂದಿದ್ದಾರೆ.
"ಆತ ಭಾರತಕ್ಕೆ ಬಂದು ಟೆಸ್ಟ್ ಸರಣಿಯನ್ನು ಆಡಿದಾಗ ಏನೋ ಆಗುತ್ತದೆ. ಆತನಿಗೆ ಹೆಚ್ಚಿನ ರನ್ಗಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಕಾಲಿನ ಕನಿಷ್ಠ ಚಲನೆಯ ಜೊತೆಗೆ ಕೈಯನ್ನು ಆತ ಚೆಂಡಿನತ್ತ ಎಸೆಯುತ್ತಾರೆ. ಆತನ ಮುಂಗಾಲು ಹೆಚ್ಚು ಮುಂದೆ ಬರುವುದಿಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ.
"ವಾರ್ನರ್ ಅವರ ಸಾಮರ್ಥ್ಯವೇ ಕಟ್ ಶಾಟ್ ಹಾಗೂ ಪುಲ್ ಶಾಟ್. ಆದರೆ ಭಾರತದಲ್ಲಿ ವಾರ್ನರ್ ಅವರಿಂದ ಈ ಶಾಟ್ಗಳನ್ನು ಹೆಚ್ಚಾಗಿ ಕಾಣಲು ಸಿಗುವುದಿಲ್ಲ. ಯಾಕೆಂದರೆ ಇಲ್ಲಿ ಕಟ್ಶಾಟ್ಗಳನ್ನು ಹೊಡೆಯಲು ಹೆಚ್ಚು ಅವಕಾಶ ದೊರೆಯುವುದಿಲ್ಲ. ಪ್ರಯತ್ನಿಸಿದರೂ ಹೆಚ್ಚು ಬೌನ್ಸ್ ಇರುವುಲ್ಲ. ಬೌನ್ಸ್ ದೊರೆತರೂ ಚೆಂಡಿನಲ್ಲಿ ವೇಗ ಇರುವುದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಬ್ಯಾಟಿಂಗ್ನ ರಕ್ಷಣಾತ್ಮಕ ಶೈಲಿಯಲ್ಲಿ ಆತ್ಮವಿಶ್ವಾಸವಿರುವುದಿಲ್ಲ ಎಂದಿದ್ದಾರೆ. ಇದು ಕೂಡ ವಾರ್ನರ್ ವೈಫಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದಿದ್ದಾರೆ. "ತನ್ನ ರಕ್ಷಣಾತ್ಮಕ ಆಟದಲ್ಲಿ ವಾರ್ನರ್ಗೆ ಆತ್ಮವಿಶ್ವಾಸದ ಕೊರತೆಯಿದೆ. ಆತ ರಿಕಿ ಪಾಂಟಿಂಗ್ ರೀತಿ ಬಲದಿಂದಲೇ ಚೆಂಡನ್ನು ಎದುರಿಸುತ್ತಾರೆ. ಆದರೆ ಅದರಿಂದ ಯಶಸ್ಸು ಸಾಧ್ಯವಿಲ್ಲ. ಹಾಗಾಗಿ ತನ್ನ ಕೌಶಲ್ಯದಲ್ಲಿ ಆತ ಬದಲಾವಣೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇತ್ತಂಡಗಳ ಸ್ಕ್ವಾಡ್
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಭಾರತದ ಸ್ಕ್ವಾಡ್ ಹೀಗಿದೆ(ಮೊದಲ 2 ಟೆಸ್ಟ್ ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್