
ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ವೇಗ ಹಾಗೂ ಪ್ರದರ್ಶನದ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಉಮ್ರಾನ್ ಮಲಿಕ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಪ್ರತಿ ಪಂದ್ಯದಲ್ಲಿಯೂ ತನ್ನ ವೇಗದ ಮೂಲಕ ಐಪಿಎಲ್ ಪ್ರೇಮಿಗಳು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಗಂಟೆಗೆ ಸುಮಾರು 157 ಕಿ. ಮೀ ವೇಗದಲ್ಲಿ ಬೌಲಿಂಗ್ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಆದರೆ ಉಮ್ರಾನ್ ಮಲಿಕ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲವಾಗಿದ್ದಲ್ಲದೆ ರನ್ ಬಿಟ್ಟುಕೊಡುವುದರಲ್ಲಿಯೂ ದುಬಾರಿಯಾದರು. ನಿಗದಿತ 4 ಓವರ್ಗಳ ಕೋಟಾದಲ್ಲಿ ಉಮ್ರಾನ್ ಮಲಿಕ್ 52 ರನ್ ಬಿಟ್ಟುಕೊಟ್ಟಿದ್ದಾರೆ. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಉಮ್ರಾನ್ ಮಲಿಕ್ ಅವರನ್ನು ಟೀಮ್ ಇಂಡಿಯಾ ಶೀಘ್ರವಾಗಿ ಸೇರ್ಪಡೆಗೊಳಿಸಲಬೇಕು ಎಂಬ ಚರ್ಚೆ ಬಗ್ಗೆ ಮಾತನಾಡಿದ ಅವರು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಆತುರ ಬೇಡ ಎಂದ ಆಕಾಶ್ ಚೋಪ್ರ: ಉಮ್ರಾನ್ ಮಲಿಕ್ ಮುಂದಿನ ಟಿ20 ವಿಶ್ವಕಪ್ನಲ್ಲಿ ಭಾರತೀಯ ತಂಡಕ್ಕೆ ಸೇರ್ಪೆಯಾಗುವ ಬಗ್ಗೆ ಆತುರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. "ಭಾರತದಲ್ಲಿ ಒಂದು ನಿಯಮವಿದೆ ನೀವು ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುತ್ತೀರಿ ಎಂದಾದರೆ ಕಂಡಿತವಾಗಿಯೂ ನೀವು ಭಾರತ ತಂಡವನ್ನು ಪ್ರತಿನಿಧಿಸುತ್ತೀರಿ. ಅದು ತಕ್ಷಣವೇ ಆಗಿರಬಹುದು ಅಥವಾ ಸ್ವಲ್ಪ ತಡವಾಗಿ ಇರಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ಕಳವಳಪಡಬೇಕಾದ ಅಂಶ ಹೇಳಿದ ಚೋಪ್ರ: ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಉಮ್ರಾನ್ ಮಲಿಕ್ ಬೌಲಿಂಗ್ ವಿಚಾರವಾಗಿಒ ಕಳವಳಪಡೆಬೇಕಾದ ಅಂಶವೊಂದನ್ನು ವ್ಯಕ್ತಪಡಿಸಿದ್ದಾರೆ. "ಉಮ್ರಾನ್ ಮಲಿಕ್ ಕಳೆದ ಎರಡು ಪಂದ್ಯಗಳಲ್ಲಿ 8 ಓವರ್ಗಳನ್ನು ಎಸೆದಿದ್ದು ಈ ಎಂಟು ಓವರ್ಗಳಲ್ಲಿ 100 ರನ್ ಬಿಟ್ಟುಕೊಟ್ಟಿದ್ದಾರೆ. ಆತನಿಗೆ ಸಮಯವನ್ನು ನೀಡಿ. ಆತ ಟೀಮ್ ಇಂಡಿಯಾ ಜೊತೆಗೆ ಖಂಡಿತಾ ಪ್ರಯಾಣಿಸಬೇಕಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿಸಲು ಆತುರಪಡಬಾರದು" ಎಂದಿದ್ದಾರೆ ಆಕಾಶ್ ಚೋಪ್ರ.
ಫಾರ್ಮ್ ಕಂಡುಕೊಂಡ ಭುವಿ: ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ಮತ್ತೋರ್ವ ವೇಗಿ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚುತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅಸ್ಥಿರ ಪ್ರದರ್ಶನದ ಮೂಲಕ ಭುವಿ ಚರ್ಚೆಗೆ ಕಾರಣವಾಗಿದ್ದರು. ಹೀಗಾಗಿ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿತ್ತು. ಈ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರ ಭುವನೇಶ್ವರ್ ಕುಮಾರ್ ವೇಗದ ಬಗ್ಗೆ ಹೆಚ್ಚು ಗಮನ ನೀಡದೆ ಸ್ವಿಂಗ್ ಬಗ್ಗೆ ಗಮನಹರಿಸುತ್ತಿದ್ದಾರೆ ಎಂದಿದ್ದಾರೆ. ಭುವನೇಶ್ವರ್ ಕುಮಾರ್ಗೆ ತನ್ನ ಸಾಮರ್ಥ್ಯ ಅರ್ಥವಾಗಿದ್ದು ವೇಗಕ್ಕಿಂತ ಸ್ವಿಂಗ್ ತನ್ನ ಸಾಮರ್ಥ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.