2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಮತ್ತು ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ನೋಡಿ ಪಾಕಿಸ್ತಾನದವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಕಾಲು ಕೆದರಿಕೊಂಡು ಏನಾದರೂ ಒಂದು ಆರೋಪ ಮಾಡುತ್ತಿದೆ.
ಭಾರತ ತಂಡ ಈಗಾಗಲೇ ಏಳಕ್ಕೆ ಏಳು ಪಂದ್ಯಗಳ ಗೆಲುವಿನ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದರೆ, ಪಾಕಿಸ್ತಾನ ತಂಡ ಕೇವಲ ಮೂರು ಗೆಲುವು ಪಡೆದು ಸೆಮಿಫೈನಲ್ಗೆ ಅರ್ಹತೆ ಗಳಿಸಲು ಒದ್ದಾಡುತ್ತಿದೆ. ಇದೇ ವೇಳೆ ಶ್ರೀಲಂಕಾ ವಿರುದ್ಧ ಭಾರತದ ಗೆಲುವಿಗೆ ಪಾಕಿಸ್ತಾನ ಟಿವಿ ಶೋಗಳು ಮತ್ತು ಕ್ರಿಕೆಟ್ ಪಂಡಿತರು ಕಿಡಿಕಾರುತ್ತಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಚೆಂಡಿನೊಂದಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ABN ಚಾನೆಲ್ನ ಕ್ರಿಕೆಟ್ ಶೋ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿರುದ್ಧದ ಹಾಸ್ಯಾಸ್ಪದ ಆರೋಪಗಳಿಗಾಗಿ ಪಾಕಿಸ್ತಾನದ ಟಿವಿ ಶೋ ವಿರುದ್ಧ ಭಾರತದ ತಂಡದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಎಕ್ಸ್ (ಟ್ವಿಟ್ಟರ್)ನಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಅವರು ABN ಚಾನೆಲ್ನಲ್ಲಿ ಮಾತನಾಡುತ್ತಾ, ಭಾರತ ತಂಡದ ಕೈಯಲ್ಲಿ ಚೆಂಡು ಇದ್ದಾಗಲೆಲ್ಲಾ ಪಿಚ್ ಬೌಲಿಂಗ್ ಸ್ನೇಹಿಯಾಗಿ ಮಾರ್ಪಟ್ಟಿದೆ ಎಂದು ತೋರುತ್ತದೆ.

ಡಿಆರ್ಎಸ್ ನಿರ್ಧಾರಗಳಲ್ಲಿ ಅಂಪೈರ್ಗಳು ಭಾರತ ತಂಡಕ್ಕೆ ಸಹಾಯ ಮಾಡುತ್ತಿರುವಂತೆ ತೋರುತ್ತಿದೆ ಎಂದು ಅವರು ಹೇಳಿದರು. ಈ ವಿಶ್ವಕಪ್ ಮುಖ್ಯವಾಗಿ ಭಾರತದ ದಾರಿಯಲ್ಲಿ ಸಾಗುತ್ತಿದೆ ಎಂದು ತೋರುತ್ತದೆ. ಟೂರ್ನಿಯಲ್ಲಿ ಭಾರತಕ್ಕೆ ಐಸಿಸಿ ವಿಶೇಷ ಚೆಂಡುಗಳನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಟಿವಿ ಶೋ ಆರೋಪಿಸಿದೆ.
ಇದಕ್ಕೆ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಶೀಘ್ರದಲ್ಲೇ ಪ್ರತಿಕ್ರಿಯಿಸಿದರು ಮತ್ತು ಕಾರ್ಯಕ್ರಮವನ್ನು ಹಾಸ್ಯಾಸ್ಪದವೆಂದು ಕರೆದರು. ಟಿವಿ ಕಾರ್ಯಕ್ರಮವು ಗಂಭೀರವಾಗಿರಲಿಲ್ಲ ಮತ್ತು ಅವರು ಅದಕ್ಕೆ ಹಾಸ್ಯ ಶೋ ಎಂದು ಲೇಬಲ್ ಹಾಕಬೇಕು ಎಂದು ತಿಳಿಸಿದರು.
"ಇದು ಗಂಭೀರವಾದ ಕ್ರಿಕೆಟ್ ಶೋ ಆಗಿತ್ತೇ? ಇಲ್ಲದಿದ್ದರೆ, ದಯವಿಟ್ಟು ಎಲ್ಲೋ ಒಂದು ಕಡೆ ಇಂಗ್ಲಿಷ್ನಲ್ಲಿ 'ವ್ಯಂಗ್ಯ' 'ಹಾಸ್ಯ' ಎಂದು ನಮೂದಿಸಿ. ಅಂದರೆ, ಈಗಾಗಲೇ ಉರ್ದುವಿನಲ್ಲಿ ಬರೆದಿರಬಹುದು. ಆದರೆ ದುರದೃಷ್ಟವಶಾತ್, ನನಗೆ ಅದನ್ನು ಓದಲು/ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ," ಎಂದು ಆಕಾಶ್ ಚೋಪ್ರಾ ತಮ್ಮ ಟ್ವೀಟ್ನಲ್ಲಿ ತಿರುಗೇಟು ನೀಡಿದರು.
ಭಾರತ ತಂಡವು ತನ್ನ 7ನೇ ಪಂದ್ಯದಲ್ಲಿ ಶ್ರೀಲಂಕಾವನ್ನು 302 ರನ್ಗಳಿಂದ ಸೋಲಿಸಿದ ನಂತರ, ಪಾಕಿಸ್ತಾನಿ ಟಿವಿ ಚಾನೆಲ್ನಿಂದ ಭಾರತ ವಿರೋಧಿ ಹೇಳಿಕೆಗಳು ಬಂದವು. ಏಕೆಂದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತದ ವೇಗಿಗಳು ಶ್ರೀಲಂಕಾ ತಂಡವನ್ನು 358 ರನ್ಗಳ ರಕ್ಷಣೆಯಲ್ಲಿ ಸುನಾಮಿಯಂತೆ ಎರಗಿ ಕೇವಲ 55 ರನ್ಗಳಿಗೆ ಆಲೌಟ್ ಮಾಡಿದರು.
ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ತಮ್ಮ ಹೆಸರಿಗೆ 5 ವಿಕೆಟ್ಗಳೊಂದಿಗೆ ಸ್ಟಾರ್ ಪ್ರದರ್ಶನಕಾರನಾದರೆ, ಮೊಹಮ್ಮದ್ ಸಿರಾಜ್ ವಿಕೆಟ್ ಕಬಳಿಸಿ ಶ್ರೀಲಂಕಾ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದರು.
ಇನ್ನು ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡದ ಸೋಲಿಗೆ ನಾಂದಿ ಹಾಡಿದರೆ, ರವೀಂದ್ರ ಜಡೇಜಾ ಕೊನೆಯ ವಿಕೆಟ್ ಪಡೆದು ಸಿಂಹಳೀಯರ ಸೋಲಿಗೆ ಅಂತ್ಯ ಹಾಡಿದರು.