ಬುಧವಾರ, ಫೆಬ್ರವರಿ 21ರಂದು ಅಫ್ಘಾನಿಸ್ತಾನ ವಿರುದ್ಧ ದಂಬುಲ್ಲಾದಲ್ಲಿ ನಡೆದ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಅಂಪೈರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಶ್ರೀಲಂಕಾ ತಂಡದ ನಾಯಕ ವನಿಂದು ಹಸರಂಗ ತಪ್ಪಿತಸ್ಥರೆಂದು ಕಂಡುಬಂದ ಕಾರಣ, ಶನಿವಾರ, ಫೆಬ್ರವರಿ 24ರಂದು ಐಸಿಸಿ ಎರಡು ಪಂದ್ಯಗಳ ನಿಷೇಧ ಹೇರಿದೆ.
ಪಂದ್ಯದ ಅಂತ್ಯದ ನಂತರ ಈ ಘಟನೆ ಸಂಭವಿಸಿದ್ದು, ಆರ್ಸಿಬಿ ತಂಡದ ಮಾಜಿ ಬೌಲರ್ ವನಿಂದು ಹಸರಂಗ ಅವರು ನೋ ಬಾಲ್ ತೀರ್ಪಿಗೆ ಅಂಪೈರ್ ಲಿಂಡನ್ ಹ್ಯಾನಿಬಲ್ ಅವರನ್ನು ಟೀಕಿಸಿದರು. ಇದು ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ನಡೆದಿದೆ.
ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 3 ರನ್ಗಳಿಂದ ಗೆದ್ದ ರೋಚಕ ಪಂದ್ಯದಲ್ಲಿ ಅಂಪೈರ್ ವಿರುದ್ಧ ಏಕಾಏಕಿ ನಿಂದಿಸಿದ ವನಿಂದು ಹಸರಂಗ ಅವರಿಗೆ 3 ಡಿಮೆರಿಟ್ ಅಂಕಗಳು ಮತ್ತು ಪಂದ್ಯ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ.

ಐಸಿಸಿ ನೀತಿ ಸಂಹಿತೆಯ ಇತ್ತೀಚಿನ ಉಲ್ಲಂಘನೆಯ ನಂತರ, 24 ತಿಂಗಳ ಅವಧಿಯಲ್ಲಿ ವನಿಂದು ಹಸರಂಗ ಅವರ ಸಂಚಿತ ಡಿಮೆರಿಟ್ ಅಂಕಗಳು ಐದಕ್ಕೆ ಏರಿದವು. ಹಸರಂಗ ಅವರ ಈ ಐದು ಡಿಮೆರಿಟ್ ಪಾಯಿಂಟ್ಗಳು ಎರಡು ಪಂದ್ಯಗಳ ನಿಷೇಧ ಅಂಕಗಳಾಗಿ ಪರಿವರ್ತನೆಗೊಂಡವು.
ಐದು ಡಿಮೆರಿಟ್ ಪಾಯಿಂಟ್ಗಳು ಒಂದು ಟೆಸ್ಟ್ ಅಥವಾ ಎರಡು ಏಕದಿನ ಅಥವಾ ಎರಡು ಟಿ20 ಪಂದ್ಯಗಳ ನಿಷೇಧಕ್ಕೆ ಸಮನಾಗಿರುವುದರಿಂದ, ಆಟಗಾರ ಅಥವಾ ಆಟಗಾರರ ಬೆಂಬಲಿಗ ಸಿಬ್ಬಂದಿಗೆ ಯಾವುದು ಮೊದಲು ಬಂದರೂ ಆ ಪಂದ್ಯಗಳು ಅನ್ವಯಿಸುತ್ತವೆ.
ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡದ ಮೊದಲ ಎರಡು ಟಿ20 ಪಂದ್ಯಗಳಿಂದ ವನಿಂದು ಹಸರಂಗ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ ಅಫ್ಘಾನಿಸ್ತಾನ ತಂಡದ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಕೂಡ ದಂಡಕ್ಕೆ ಗುರಿಯಾದರು. ಅದೇ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಗುರ್ಬಾಜ್ ತಮ್ಮ ಪಂದ್ಯದ ಶುಲ್ಕದ ಶೇಕಡಾ 15ರಷ್ಟು ದಂಡಕ್ಕೆ ಗುರಿಯಾದರು.

ರಹಮಾನುಲ್ಲಾ ಗುರ್ಬಾಜ್ ಅವರು ಸಂಹಿತೆಯ 2.4ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಇದು ಅಂತಾರಾಷ್ಟ್ರೀಯ ಪಂದ್ಯದ ಸಂದರ್ಭದಲ್ಲಿ ಅಂಪೈರ್ನ ಸೂಚನೆಯನ್ನು ಪಾಲಿಸದಿರುವುದಕ್ಕೆ ಸಂಬಂಧಿಸಿದೆ.
ಪದೇ ಪದೇ ಎಚ್ಚರಿಕೆ ನೀಡಿದರೂ ಮೈದಾನದಲ್ಲಿ ಬ್ಯಾಟ್ ಹಿಡಿತ ಬದಲಿಸಿದ ಕಾರಣಕ್ಕೆ ರಹಮಾನುಲ್ಲಾ ಗುರ್ಬಾಜ್ ಅವರಿಗೆ ದಂಡ ವಿಧಿಸಲಾಗಿದೆ.
ಇಬ್ಬರೂ ಆಟಗಾರರು ಅಪರಾಧಗಳನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪ್ರಸ್ತಾಪಿಸಿದ ನಿರ್ಬಂಧಗಳನ್ನು ಒಪ್ಪಿಕೊಂಡರು ಮತ್ತು ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲವೆಂದರು.
ಆನ್-ಫೀಲ್ಡ್ ಅಂಪೈರ್ಗಳಾದ ಲಿಂಡನ್ ಹ್ಯಾನಿಬಲ್ ಮತ್ತು ರವೀಂದ್ರ ವಿಮಲಸಿರಿ, ಮೂರನೇ ಅಂಪೈರ್ ರುಚಿರಾ ಪಲ್ಲಿಯಗುರುಗೆ ಮತ್ತು ಮತ್ತು ನಾಲ್ಕನೇ ಅಂಪೈರ್ ರಾನ್ಮೋರ್ ಮಾರ್ಟಿನೆಜ್ ಅವರು ಆರೋಪ ಹೊರಿಸಿದ್ದಾರೆ.