
2018ರ ಸಮಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮತ್ತು ಮಾಜಿ ನಾಯಕ ಅನಿಲ್ ಕುಂಬ್ಳೆ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಭಾರತ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ತಮ್ಮನ್ನು ಸಂಪರ್ಕಿಸಿದ್ದರು ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿದ ಬಗ್ಗೆ ವೀರೇಂದ್ರ ಸೆಹ್ವಾಗ್ ವಿವರವಾಗಿ ಬಹಿರಂಗಪಡಿಸಿದ್ದಾರೆ. ಅನಿಲ್ ಕುಂಬ್ಳೆ ಅವರನ್ನು ಜೂನ್ 2016ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು.
ಆದರೆ, 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದ ಒಂದು ವರ್ಷದ ನಂತರ ಅನಿಲ್ ಕುಂಬ್ಳೆ ಅವರ ಒಪ್ಪಂದವು ಕೊನೆಗೊಂಡಿತು. ಆ ಬಳಿಕ ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು.
ಅಂದಿನ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ನಾಯಕರಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವೆ "ಪರಿಸ್ಥಿತಿಗಳು ಸರಿಯಾಗಿ ನಡೆಯುತ್ತಿಲ್ಲ' ಎಂದು ಹೇಳಿದ್ದರು. ಹೀಗಾಗಿ ಮಂಡಳಿಯು ಕುಂಬ್ಳೆ ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸಿತು ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.

"ಭಾರತ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ, ನಂತರ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ನನ್ನನ್ನು ಸಂಪರ್ಕಿಸದಿದ್ದರೆ ನಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ," ಎಂದು ವೀರೇಂದ್ರ ಸೆಹ್ವಾಗ್ ನ್ಯೂಸ್ 18 ಇಂಡಿಯಾಗೆ ತಿಳಿಸಿದ್ದಾರೆ.
"ನಾವು ಈಗಾಗಲೇ ಸಭೆ ನಡೆಸಿದ್ದೇವೆ. ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವೆ ಎಲ್ಲವೂ ಸರಿಯಾಗಿಲ್ಲ. ನೀವು ಕೋಚ್ ಸ್ಥಾನವನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ನಂತರ ಅನಿಲ್ ಕುಂಬ್ಳೆ ಅವರ ಒಪ್ಪಂದವು ಮುಕ್ತಾಯಗೊಳ್ಳುತ್ತದೆ. ತದನಂತರ ನೀವು ತಂಡದೊಂದಿಗೆ ವೆಸ್ಟ್ ಇಂಡೀಸ್ ಸರಣಿಗೆ ಪ್ರಯಾಣಿಸಬಹುದು ಎಂದು ಅಮಿತಾಬ್ ಚೌಧರಿ ನನಗೆ ತಿಳಿಸಿದ್ದರು," ಎಂದು ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದರು.

ಇನ್ನು ಭಾರತ ತಂಡದ ನಾಯಕತ್ವ ಜವಾಬ್ದಾರಿ ತೆಗೆದುಕೊಳ್ಳದಿರುವ ಬಗ್ಗೆ ನಿಮಗೆ ವಿಷಾದವಿದೆಯೇ ಎಂದು ವೀರೇಂದ್ರ ಸೆಹ್ವಾಗ್ ಅವರನ್ನು ಪ್ರಶ್ನಿಸಿದಾಗ, "ನನ್ನ ವೃತ್ತಿಜೀವನದಲ್ಲಿ ಇಷ್ಟೊಂದು ಸಾಧಿಸಿದ್ದಕ್ಕಾಗಿ ನಾನು ಸಂತೋಷವಾಗಿದ್ದೇನೆ,'' ಎಂದು ಭಾರತ ತಂಡದ ಮಾಜಿ ಓಪನರ್ ಉತ್ತರಿಸಿದರು.
"ನಜಾಫ್ಗಢದ ಸಣ್ಣ ರೈತ ಕುಟುಂಬದಿಂದ ಬಂದ ನನಗೆ ಭಾರತ ರಾಷ್ಟ್ರೀಯ ತಂಡಕ್ಕಾಗಿ ಆಡಲು ಅವಕಾಶ ಸಿಕ್ಕಿತು. ಭಾರತೀಯ ಅಭಿಮಾನಿಗಳಿಂದ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದುಕೊಂಡಿದ್ದೇನೆ. ನಾನು ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದರೂ ಸಹ ನನಗೆ ಅದೇ ಗೌರವ ಸಿಗುತ್ತಿತ್ತು," ಎಂದು ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ತಿಳಿಸಿದರು.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ ಸೋತ ನಂತರ ಅನಿಲ್ ಕುಂಬ್ಳೆ ಅವರನ್ನು ಬದಲಾಯಿಸಿ 1983ರ ವಿಶ್ವಕಪ್ ವಿಜೇತ ಸದಸ್ಯ ರವಿಶಾಸ್ತ್ರಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು.