
ಐಪಿಎಲ್ 2022ರ ಐಪಿಎಲ್ ಆವೃತ್ತಿಗೂ ಮುನ್ನ ನಡೆಯಲಿರುವ ಮಹಾ ಹರಾಜಿಗಾಗಿ ವೇದಿಕೆ ಸಿದ್ಧವಾಗಿದ್ದು ಎಲ್ಲಾ ಫ್ರಾಂಚೈಸಿಗಳು ಕೂಡ ರೀಟೈನ್ ಮಾಡಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹೀಗಾಗಿ ಹರಾಜಿಗೆ ಲಭ್ಯವಾಗುವ ಆಟಗಾರರು ಯಾರೆಂಬುದು ಬಹುತೇಕ ಸ್ಪಷ್ಟವಾಗಿದೆ. ನೂತನ ಎರಡು ತಂಡಗಳಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದ್ದು ಈ ಹರಾಜಿಗೂ ಮುನ್ನ ತಲಾ ಮೂರು ಆಟಗಾರರನ್ನು ಸೇರಿಸಿಕೊಳ್ಳುವ ಅವಕಾಶ ನೀಡಲಾಗಿದ್ದು ಆ ನಂತರ ಇದಕ್ಕೆ ಮತ್ತಷ್ಟು ಸ್ಪಷ್ಟತೆ ದೊರೆಯಲಿದೆ.
ಇನ್ನು ಈ ಬಾರಿಯ ರೀ ಟೆನ್ಶನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು ಮೊದಲ ಆಯ್ಕೆಯ ಆಟಗಾರನಾಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ. ನಾಯಕ ಎಂಎಸ್ ಧೋನಿ ಎರಡನೇ ಆಯ್ಕೆಯ ಆಟಗಾರನಾಗಿ ಉಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂಎಸ್ ಧೋನಿ ನಂತರ ನಾಯಕನಾಗಲಿರುವ ಆಟಗಾರ ಯಾರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಕಣಕ್ಕಿಳಿದಿದ್ದರು. ಸಿಕ್ಕ ಅವಕಾಶದಲ್ಲಿ ರಾಬಿನ್ ಉತ್ತಪ್ಪ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆದರೆ ನಿರೀಕ್ಷಿತವೆಂಬಂತೆ ಉತ್ತಪ್ಪ ಹರಾಜಿಗೆ ಬಿಡುಗಡೆಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಎಂಎಸ್ ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಮಡದ ನಾಯಕನಾಗಿ ರವೀಂದ್ರ ಜಡೇಜಾ ಆಯ್ಕೆಯಾಗಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ರೀಟೆನ್ಶನ್ನಲ್ಲಿ ಎಂಎಸ್ ಧೋನಿ ಮೊದಲ ಸ್ಲ್ಯಾಬ್ಅನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದು ಜಡೇಜಾ 16 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಇದು ಕೂಡ ರವೀಂದ್ರ ಜಡೇಜಾ ಅವರ ಮೇಲೆ ಸಿಎಸ್ಕೆ ಫ್ರಾಂಚೈಸಿ ಹಾಗೂ ನಾಯಕ ಧೋನಿ ಇಟ್ಟಿರುವ ನಂಬಿಕೆಯನ್ನು ವ್ಯಕ್ತಪಡಿಸುತ್ತಿದೆ.
"ನನಗೆ ಖಂಡಿತಾ ಗೊತ್ತಿದೆ ಈ ನಿರ್ಧಾರವನ್ನು ಎಂಎಸ್ ಧೋನಿಯೇ ತೆಗೆದುಕೊಂಡಿರುತ್ತಾರೆ. ರವೀಂದ್ರ ಜಡೇಜಾ ಹೊಂದಿರುವ ಮೌಲ್ಯವನ್ನು ಎಂಎಸ್ ಧೋನಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಅರಿತುಕೊಂಡಿರುವ ಪ್ರಕಾರ ಎಂಎಸ್ ಧೋನಿಯ ನಿವೃತ್ತಿಯ ಬಳಿಕ ತಂಡವನ್ನು ಮುನ್ನಡೆಸುವ ಆಟಗಾರ ರವೀಂದ್ರ ಜಡೇಜಾ ಅವರೇ ಆಗಿರುತ್ತಾರೆ. ಹಾಗಾಗಿ ಅವರಿಗೆ ಸಲ್ಲಬೇಕಾದ ಮೌಲ್ಯವನ್ನು ನೀಡಿದ್ದಾರೆ" ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
"ರವೀಂದ್ರ ಜಡೇಜಾ ಆಟಗಾರನಾಗಿ ಅದ್ಭುತವಾಗಿ ಪ್ರದರ್ಶನ ನಿಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆತ ಟೆಸ್ಟ್ ಕ್ರಿಕೆಟ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಆರನೇ ಕ್ರಮಾಂಕದಲ್ಲಿ ಇಳಿದು ಎಂತಾ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಕೂಡ ನಾವು ನೋಡಿದ್ದೇವೆ. ಹಾಗಾಗಿ ಆತನೇ ಸಿಎಸ್ಕೆ ತಂಡದ ಮುಮದಿನ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ಬಯಸುತ್ತೇನೆ. ನನ್ನ ಪ್ರಕಾರ ಎಂಎಸ್ ಧೋನಿ ನಿವೃತ್ತಿಯನ್ನು ಪಡೆಯಲು ನಿರ್ಧರಿಸಿದ ನಂತರ ರವೀಂದ್ರ ಜಡೇಜಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ" ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.