ಬೆಂಗಳೂರು, ಡಿ. 18: ಪ್ರಸಕ್ತ ವರ್ಷ ರಣಜಿ ಟೂರ್ನಿಯಿಂದ ಹೊರ ಬಿದ್ದಿರುವ ಕರ್ನಾಟಕ ಈಗ ವಿಜಯ್ ಹಜಾರೆ ಟ್ರೋಫಿಯಿಂದ ಹೊರ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಶುಕ್ರವಾರ ಭರ್ಜರಿ ಜಯ ದಾಖಲಿಸಿದರೂ ವಿನಯ್ ಕುಮಾರ್ ಪಡೆ ಕ್ವಾರ್ಟರ್ ಫೈನಲ್ ಹಂತ ತಲುಪುವಲ್ಲಿ ಎಡವಿದೆ. ಬಿ ಗುಂಪಿನಿಂದ ಜಾರ್ಖಂಡ್ ಹಾಗೂ ಗುಜರಾತ್ ಮುಂದಿನ ಹಂತಕ್ಕೆ ಜಿಗಿದಿವೆ.
ಕೇರಳ ವಿರುದ್ಧ ಬೃಹತ್ ಗೆಲುವು ದಾಖಲಿಸಿ ರನ್ ಸರಾಸರಿ ಉತ್ತಮ ಪಡಿಸಿಕೊಂಡಿದ್ದ ಕರ್ನಾಟಕ ತಂಡಕ್ಕೆ ಅದೃಷ್ಟ ಕೈಕೊಟ್ಟಿದೆ. ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಹಂತ ತಲುಪಬೇಕಾದರೆ ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ಕೇರಳ ಜಯ ಗಳಿಸಬೇಕಿತ್ತು.
ಆದರೆ, ಕೇರಳವನ್ನು 102ರನ್ನಿಗೆ ನಿಯಂತ್ರಿಸಿದ ಪಾರ್ಥೀವ್ ಪಟೇಲ್ ಪಡೆ 32.5 ಓವರ್ ಗಳಲ್ಲಿ 103/3 ಸ್ಕೋರ್ ಮಾಡಿ ಕ್ವಾರ್ಟರ್ ಫೈನಲ್ ತಲುಪಿದೆ. [ಕೇರಳ ವಿರುದ್ಧ ಕರ್ನಾಟಕಕ್ಕೆ ಸಕತ್ ಗೆಲುವು]

ಇತ್ತ ಕರ್ನಾಟಕ ತಂಡ ಮೊದಲು ಬ್ಯಾಟ್ ಮಾಡಿ 349/5 ಸ್ಕೋರ್ ಮಾಡಿತ್ತು. ಬೃಹತ್ ಮೊತ್ತ ಎದುರಿಸಿದ ಜಮ್ಮು ಮತ್ತು ಕಾಶ್ಮೀರ ತಂಡ 27.3 ಓವರ್ ಗಳಲ್ಲಿ 142 ಸ್ಕೋರಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. ಬೌಲಿಂಗ್ ನಲ್ಲಿ ವಿನಯ್, ಶ್ರೇಯಸ್, ಅರವಿಂದ್ ಶ್ರೀನಾಥ್ ತಲಾ 2, ಜೆ ಸುಚಿತ್ 3 ಹಾಗೂ ಮಿಥುನ್ 1 ವಿಕೆಟ್ ಪಡೆದರು. [ರಣಜಿ ಟ್ರೋಫಿ: ಹಾಲಿ ಚಾಂಪಿಯನ್ ಕರ್ನಾಟಕ ಔಟ್]
ಇದಕ್ಕೂ ಮುನ್ನ ಕರ್ನಾಟಕ ಪರ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ 47ರನ್, ಮನೀಶ್ ಪಾಂಡೆ 79ರನ್ ಹಾಗೂ ಕೊನೆ ಹಂತದಲ್ಲಿ ಸಿಎಂ ಗೌತಮ್ ಅವರು 10 ಬೌಂಡರಿ 2 ಸಿಕ್ಸರ್ ಇದ್ದ 102 ಎಸೆತಗಳಲ್ಲಿ ಅಜೇಯ 109 ರನ್ ಮತ್ತು ವಿನಯ್ ಕುಮಾರ್ ಅವರು 20 ಎಸೆತಗಳಲ್ಲಿ 51 ರನ್ (3x4, 6x6) ಉತ್ತಮ ಪ್ರದರ್ಶನ ನೀಡಿದರು. ಆದರೆ, ರಣಜಿ ಚಾಂಪಿಯನ್ ತಂಡ ಹಾಗೂ ಸತತ ಎರಡು ವರ್ಷ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕ ಈ ಬಾರಿ ಭಾರಿ ಮುಖಭಂಗ ಅನುಭವಿಸಿದೆ. (ಒನ್ ಇಂಡಿಯಾ ಸುದ್ದಿ)