
ಬೆಂಗಳೂರು, ಆಗಸ್ಟ್ 7: ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ನೀಡಲು ವಯಸ್ಸು ಮಾನದಂಡವಾಗಬಾರದು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
'ಒಬ್ಬ ಉತ್ತಮ ಆಟಗಾರನಾಗಿದ್ದರೆ ಆತ ರಾಷ್ಟ್ರೀಯ ತಂಡಕ್ಕೆ ಆಡಬೇಕು. ಆಯ್ಕೆ ಮಾಡಲು ವಯಸ್ಸು ಮಾನದಂಡವಾಗಬಾರದು' ಎಂದು ಹೇಳಿದ್ದಾರೆ.
ಅದಕ್ಕೆ ತಮ್ಮ ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ದಾಖಲೆಗಳನ್ನೇ ಅವರು ಉದಾಹರಣೆಯಾಗಿ ನೀಡಿದ್ದಾರೆ.
'ನಾನು ಮೊದಲ ಪಂದ್ಯಕ್ಕೆ ಆಯ್ಕೆಯಾದಾಗ ನನಗೆ 16 ವರ್ಷ ವಯಸ್ಸು (1989ರಲ್ಲಿ ಪಾಕಿಸ್ತಾನದ ವಿರುದ್ಧ). ಅದು ನನಗೆ ಸಾಕಷ್ಟು ಸಹಾಯ ಮಾಡಿತು. ಆ ಕಾಲದ ಅತ್ಯುತ್ತಮ ಬೌಲಿಂಗ್ ದಾಳಿಯಾಗಿದ್ದ ಇಮ್ರಾನ್ ಖಾನ್, ವಾಸಿಂ ಅಕ್ರಮ್, ವಖಾರ್ ಯೂನಸ್, ಅಬ್ದುಲ್ ಖಾದಿರ್ ಅವರ ವಿರುದ್ಧ ಆಡುವುದು ಏನೆಂದು ನನಗೆ ಗೊತ್ತಿರಲಿಲ್ಲ.
ನೀವು ಅಂಚಿನ ಒಂದು ಬದಿಯನ್ನು ಮಾತ್ರ ನೋಡಬಲ್ಲವರಾಗಿರುತ್ತೀರಿ. ಅನುಭವ ಮತ್ತು ಪ್ರಬುದ್ಧತೆ ಬೆಳೆದಂತೆ ಸಮತೋಲನ ಮೂಡಿಸಲು ಅಂಚಿನ ಇನ್ನೊಂದು ಭಾಗವನ್ನು ಸಹ ನೋಡುತ್ತೀರಿ'.
'ಈ ವಯಸ್ಸಿನಲ್ಲಿ ನೀವು ಅಂಚಿನ ಮತ್ತೊಂದು ಭಾಗವನ್ನು ನೋಡಿರುವುದಿಲ್ಲ. ಹೋಗಿ ಆಡುತ್ತೀರಷ್ಟೇ. ನಾನು ಯುವ ಕ್ರಿಕೆಟಿಗರಿಗೆ ಯಾವಾಗಲೂ ಹೇಳುವುದಿಷ್ಟೇ- ಹೊರಗೆ ಹೋಗಿ ಎಂಜಾಯ್ ಮಾಡಿ. ಏಕೆಂದರೆ ಕಷ್ಟದ ಸಮಯ ಯಾವಾಗ ಬರುವುದೋ ನಿಮಗೆ ಗೊತ್ತಿರುವುದಿಲ್ಲ' ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡವು ಸ್ಯಾಮ್ ಕುರ್ರನ್ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡಿರುವಾಗ ಭಾರತದ ಭರವಸೆಯ ಪ್ರತಿಭೆ 20 ವರ್ಷದ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಆಡಿಸಿರಲಿಲ್ಲ. ಹೀಗಾಗಿ ರಿಷಬ್ ಅವರಿಗೆ ಅವಕಾಶ ನೀಡದಿರುವುದರ ಬಗ್ಗೆ ತೆಂಡೂಲ್ಕರ್ ಪರೋಕ್ಷವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ಇಂಗ್ಲೆಂಡ್ ಕೌಂಟಿ ಮಿಡ್ಲ್ಸೆಕ್ಸ್ ಸಹಯೋಗದೊಂದಿಗೆ ತಮ್ಮ ಕ್ರಿಕೆಟ್ ಅಕಾಡೆಮಿ 'ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿ'ಯ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ಈ ಅಕಾಡೆಮಿಯು ಸ್ವತಃ ತೆಂಡೂಲ್ಕರ್ ಹಾಗೂ ಮಿಡ್ಲ್ಸೆಕ್ಸ್ನಿಂದ 9 ರಿಂದ 14 ವರ್ಷದ ಒಳಗಿನ ಬಾಲಕರು ಮತ್ತು ಬಾಲಕಿಯರಿಗೆ ಕಲಿಯುವ ಅವಕಾಶ ಒದಗಿಸುತ್ತದೆ.