ಐಸಿಸಿ ಸಭೆಯಲ್ಲಿ ಬಿಸಿಸಿಐ ಎದುರಿಸಲು ಪಿಸಿಬಿ ಸಿದ್ಧತೆ : ಎಹಸಾನ್ ಮನಿ

ಕರಾಚಿ, ಫೆಬ್ರವರಿ 27 : ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಜೂನ್ 16ರಂದು ಮ್ಯಾಂಚೆಸ್ಟರ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಭಾರತ ಬಹಿಷ್ಕರಿಸಿದರೆ, ಭಾರತಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧತೆ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀರ ಹಳಿಸಿಹೋಗಿದೆ. ಭಾರತ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದು, ಪಾಕಿಸ್ತಾನದ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕೆಂಬ ನಿರ್ಣಯಕ್ಕೆ ಬಂದಿದೆ. ದುಬೈನಲ್ಲಿ ಬುಧವಾರದಿಂದ ಐಸಿಸಿಯ ತ್ರೈಮಾಸಿಕ ಸಭೆ ಆರಂಭವಾಗಲಿದ್ದು, ಈ ವಿಷಯ ಚರ್ಚೆಗೆ ಬರಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚೇರ್ಮನ್ ಎಹಸಾನ್ ಮನಿ, ಎಂಡಿ ವಾಸಿಮ್ ಖಾನ್ ಮತ್ತು ಸಿಓಓ ಸುಭಾನ್ ಅಹ್ಮದ್ ದುಬೈನಲ್ಲಿ ಹಲವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಮತ್ತು ಶನಿವಾರ ಮಹತ್ವದ ಎಕ್ಸಿಕ್ಯುಟಿವ್ ಬೋರ್ಡ್ ಸಭೆ ನಡೆಯಲಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರವನ್ನು ಐಸಿಸಿ ಸದಸ್ಯ ರಾಷ್ಟ್ರಗಳು ಹೊರಹಾಕಬೇಕು ಎಂಬ ನಿವೇದನೆಯನ್ನು ಭಾರತದ ಅಧಿಕಾರಿಗಳು ಸಲ್ಲಿಸುವ ಸಾಧ್ಯತೆಯಿದೆ.
ಐಸಿಸಿಗೆ ಈಗಾಗಲೆ ಬರೆಯಲಾಗಿರುವ ಪತ್ರದಲ್ಲಿ, ಇದನ್ನು ಪ್ರಸ್ತಾಪಿಸದಿದ್ದರೂ, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ರಾಷ್ಟ್ರ (ಪಾಕಿಸ್ತಾನ)ದ ಜೊತೆ ಉಳಿದ ರಾಷ್ಟ್ರಗಳು ಕೂಡ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಭಾರತ ಬಯಸುತ್ತಿದೆ. ಭಾರತದ ಪರ ಆಡಿದ್ದ ಕೆಲ ಮಾಜಿ ಕ್ರಿಕೆಟಿಗರು ಕೂಡ, ಜೂನ್ 16ರಂದು ನಡೆಯಲಿರುವ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಭಾರತ ಆಡಬಾರದು ಎಂದು ಆಗ್ರಹಿಸುತ್ತಿದ್ದಾರೆ.
"ಒಂದು ವೇಳೆ ಭಾರತ ವಾಕೋವರ್ ಮಾಡುವ ಹಾಗಿದ್ದರೆ ಮಾಡಲಿ, ನಮಗೆ ಅಭ್ಯಂತರವಿಲ್ಲ. ಆದರೆ, ಮುಂದೆ ನಾಕೌಟ್ ಹಂತದಲ್ಲಿ ಎರಡೂ ರಾಷ್ಟ್ರಗಳು ಮತ್ತೆ ಒಂದಕ್ಕೊಂದು ಮುಖಾಮುಖಿಯಾಗುವಂತಿದ್ದರೆ ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿ ಹೇಳಿದ್ದಾರೆ.
ಜನಾಂಗೀಯ ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರ ಮೇಲೆ 4 ಪಂದ್ಯಗಳ ನಿಷೇಧ ಹೇರಿದ್ದನ್ನು ಕೂಡ ಪಾಕ್ ಕ್ರಿಕೆಟ್ ಮಂಡಳಿ ಪ್ರಶ್ನಿಸಲಿದೆ. ಐಸಿಸಿ ಜೊತೆ ಮಾತುಕತೆ ನಡೆಸಿದ ನಂತರ ಸರ್ಫರಾಜ್ ಅಹ್ಮದ್ ಅವರು ಕ್ಷಮಾಪಣೆ ಕೇಳಿದ ಮೇಲೆ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಐಸಿಸಿಯನ್ನು ಕೋರುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications