
ಗಂಗೂಲಿ ನೀಡಿದ್ದ ಸಲಹೆಯೇನು?
ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ತಂಡಕ್ಕೆ ಕಮ್ಬ್ಯಾಕ್ ಮಾಡಲು ಗಂಗೂಲಿ ರಣಜಿಯಲ್ಲಿ ಆಡುವಂತೆ ಸಲಹೆ ನೀಡಿದ್ದರು. ಇದರಿಂದಾಗಿ ಕಮ್ಬ್ಯಾಕ್ ಮಾಡಲು ಸುಲಭವಾಗಲಿದೆ ಎಂಬ ಸಲಹೆ ನೀಡಿದ್ದರು ಗಂಗೂಲಿ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದ ಈ ಸಲಹೆಯನ್ನು ಹಾರ್ದಿಕ್ ಪಾಂಡ್ಯ ನಿರ್ಲಕ್ಷಿಸಿದ್ದಾರೆ. ದೇಶೀಯ ಕ್ರಿಕೆಟ್ನ ಸುದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಆಡದಿರುವ ನಿರ್ಧಾರ ಮಾಡಿದ್ದಾರೆ.

ಬರೋಡಾ ತಂಡದಲ್ಲಿಲ್ಲ ಹಾರ್ದಿಕ್ ಪಾಂಡ್ಯ ಹೆಸರು
ಹಾರ್ದಿಕ್ ಪಾಂಡ್ಯ ದೇಶೀಯ ಕ್ರಿಕೆಟ್ನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಮುಂಬರುವ ರಣಜಿ ಟ್ರೋಫಿಗಾಗಿ ಬರೋಡಾ ತಂಡ ಇದೀಗ 20 ಆಟಗಾರರ ಸ್ಕ್ವಾಡ್ ಅಂತಿಮಗೊಳಿಸಿದೆ. ಈ 20 ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲ. ಕೇದಾರ್ ದೇವ್ಧರ್ ಈ ತಂಡವನ್ನು ಮುನ್ನಡೆಸಲಿದ್ದಾರೆ.

ಬೆನ್ನು ನೋವಿನ ಕಾರಣದಿಂದ ಹೊರಬಿದ್ದಿರುವ ಪಾಂಡ್ಯ
ಹಾರ್ದಿಕ್ ಪಾಂಡ್ಯಗೆ ಕಳೆದ ಎರಡ್ಮೂರು ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆ ಸತತವಾಗಿ ಕಾಡುತ್ತಿದೆ. 2-19ರ ವಿಶ್ವಕಪ್ ನಂತರ ಪಾಂಡ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಪಾಂಡ್ಯ ಬ್ಯಾಟಿಂಗ್ ಮಾಡಲು ಸಮರ್ಥವಾಗಿದ್ದರೂ ಬೌಲಿಂಗ್ ಮಾಡಲು 100% ಫಿಟ್ ಆಗಿರಲಿಲ್ಲ. ಹೀಗಿದ್ದರೂ ಕಳೆದ ಟಿ20 ವಿಶ್ವಕಪ್ನಲ್ಲಿ ಪಾಂಡ್ಯ ಆಯ್ಕೆ ಮಾಡಿದ್ದಕ್ಕೆ ಸಾಕಷ್ಟು ಟೀಕೆಗಳು ಎದುರಾಗಿತ್ತು. ಹೀಗಾಗಿ ಫಿಟ್ನೆಸ್ ಸಂಪೂರ್ಣವಾಗಿ ಮರಳಿ ಗಳಿಸಲು ಹಾರ್ದಿಕ್ ಪಾಂಡ್ಯಗೆ ಸೂಚನೆ ನೀಡಲಾಗಿತ್ತು.

ಎರಡು ಹಂತದಲ್ಲಿ ನಡೆಯಲಿದೆ ರಣಜಿ ಟ್ರೋಫಿ
ಕೊರೊನಾ ವೈರಸ್ ಕಾರಣದಿಂದಾಗಿ ಕಳೆದ ವರ್ಷ ರದ್ದಾಗಿದ್ದ ರಣಜಿ ಟ್ರೋಫಿ ಈ ಬಾರಿಯೂ ರದ್ದಾಗುವ ಹಂತವನ್ನು ತಲುಪಿತ್ತು. ಆದರೆ ರಾಜ್ಯ ಕ್ರಿಕೆಟ್ ಮಂಡಳಿಗಳ ಒತ್ತಡದ ನಂತರ ಎರಡು ಹಂತದಲ್ಲಿ ರಣಜಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಲೀಗ್ ಹಂತದ ಪಂದ್ಯಗಳು ಫೆಬ್ರವರಿ 10ರಿಂದ ಆರಂಭವಾಗಲಿದ್ದು ಮಾರ್ಚ್ 15ರ ವರೆಗೆ ನಡೆಯಲಿದೆ. ನಾಕೌಟ್ ಪಂದ್ಯಗಳು ಎರಡನೇ ಹಂತದಲಲ್ಇ ನಡೆಯಲಿದ್ದು ಐಪಿಎಲ್ ಟೂರ್ನಿಯ ಮುಕ್ತಾಯದ ಬಳಿಕ ಮೇ 30ರಿಂದ ಜೂನ್ 26ರವರೆಗೆ ಇದು ಆಯೋಜನೆಯಾಗಲಿದೆ.


Click it and Unblock the Notifications












