ಪ್ರಸ್ತುತ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ವೆಸ್ಟ್ ಇಂಡೀಸ್ ತಂಡ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಬೀಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳ ಕಣ್ಣು ಉಭಯ ತಂಡಗಳ ಟಿ20 ಸರಣಿ ಮೇಲೆ ಇದೆ. ಉಭಯ ತಂಡಗಳು ಬಲಿಷ್ಠ ಟಿ20 ಸ್ಟಾರ್ ಆಟಗಾರರನ್ನು ಹೊಂದಿದ್ದು, ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ವೆಸ್ಟ್ ಇಂಡೀಸ್ ಕ್ರಿಕೆಟ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸ್ಟಾರ್ ವೇಗಿ ಅಲ್ಜಾರಿ ಜೋಸೆಫ್ ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ
ಬಾರ್ಬಡೋಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದ ವೇಳೆ ಫೀಲ್ಡಿಂಗ್ ವಿಚಾರವಾಗಿ ನಾಯಕ ಶಾಯ್ ಹೋಪ್ ಜೊತೆ ಅಲ್ಜಾರಿ ಜೋಸೆಫ್ ವಾಗ್ವಾದ ನಡೆಸಿದ್ದರು. ಹೀಗಾಗಿ ಆಶಿಸ್ತು ಮತ್ತು ಅಸಭ್ಯ ನಡುವಳಿಕೆಯ ಕಾರಣಕ್ಕೆ ಅಲ್ಜಾರಿ ಜೋಸೆಫ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತುಗೊಳಿಸಿರುವುದಾಗಿ ವೆಸ್ಟ್ ಇಂಡೀಸ್ ಮಾಹಿತಿ ಹಂಚಿಕೊಂಡಿದೆ.

ಪಂದ್ಯದ ನಂತರ ಮಾತನಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ, ಕ್ರಿಕೆಟ್ ವೆಸ್ಟ್ ಇಂಡೀಸ್ ನಿಗದಿಪಡಿಸಿದ ಮಾನದಂಡಗಳಿಗೆ ಅಲ್ಜಾರಿ ಅವರ ನಡವಳಿಕೆ ವಿರುದ್ಧವಾಗಿದೆ. ಈ ರೀತಿಯ ನಡವಳಿಕೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಘಣನೆಯ ಗಂಭೀರತೆಯನ್ನು ಒಪ್ಪಿಕೊಂಡಿರುವುದರಿಂದ ನಾವು ಈ ಕ್ರಮವನ್ನು ತೆಗೆದುಕೊಂಡಿದ್ದೇವೆ. ಅಲ್ಜಾರಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಾಯಕ ಹೋಪ್, ಅಭಿಮಾನಿಗಳಿಗೆ ಮತ್ತು ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ಗೆ ಕ್ಷಮೆಯಾಚಿಸಿ ಶಿಕ್ಷೆಯನ್ನು ಸ್ವೀಕರಿಸಿದರು ಎಂದು ತಿಳಿಸಿದ್ದಾರೆ.
'ನಾಯಕ ಶಾಯ್ ಹೋಪ್, ಅಭಿಮಾನಿಗಳು ಮತ್ತು ನನ್ನ ಸಹ ಆಟಗಾರರಲ್ಲಿ ನಾನು ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. ಒಂದು ಸಣ್ಣ ತಪ್ಪು ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಯಾರನ್ನಾದರೂ ಬೇಸರ ಮಾಡಿದ್ದರೆ ಕ್ಷಮ ಕೇಳುತ್ತೇನೆ ಎಂದು ಅಲ್ಜಾರಿ ಜೋಸೆಫ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಡ್ಯಾರೆನ್ ಸಾಮಿ ಪಂದ್ಯದ ನಂತರ ಜೋಸೆಫ್ ಅವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ನನ್ನ ಕ್ರಿಕೆಟ್ ಮೈದಾನದಲ್ಲಿ ಇಂತಹ ನಡವಳಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ನಾವು ಸ್ನೇಹಿತರಾಗಿದ್ದೇವೆ, ಆದರೆ ಇಂತಹ ಸಂಸ್ಕೃತಿ ಮತ್ತು ನಡವಳಿಕೆ ಸ್ವೀಕಾರಾರ್ಹವಲ್ಲ. ನಾವು ಖಂಡಿತವಾಗಿಯೂ ಈ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದರು.