
ದುಬಾರಿ ಜೀಪ್ ಕೊಡುಗೆ ಯಾಕೆ?
ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ 2018-2019ರಲ್ಲೂ ಐತಿಹಾಸಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಮಿನುಗಿತ್ತು. ಆದರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಸ್ವೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇರಲಿಲ್ಲ. ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿದ್ದರು. ಈ ಬಾರಿ ಸ್ಮಿತ್-ವಾರ್ನರ್ ಇದ್ದೂ ಭಾರತ ಅದೇ ಟೆಸ್ಟ್ ಸರಣಿ ಮತ್ತೆ ಗೆದ್ದಿರುವುದಷ್ಟೇ ಅಲ್ಲ, ಈ ಐತಿಹಾಸಿಕ ಗೆಲುವು ತಂದಿದ್ದು ಭಾರತೀಯ ಯುವ ಆಟಗಾರರು ಅನ್ನೋದು ವಿಶೇಷ. ಅದರಲ್ಲೂ ಗಬ್ಬಾ ಸ್ಟೇಡಿಯಂನಲ್ಲಿ ಭಾರತ ಗೆದ್ದಿದ್ದು 32 ವರ್ಷಗಳ ನಂತರ. ಈ ಹಿರಿಮೆ ಕಾರಣರಾದ ಆಟಗಾರರಿಗೆ ಆನಂದ್ ಮಹೀಂದ್ರ ಅವರು ಉಡುಗೊರೆ ಘೋಷಿಸಿದ್ದಾರೆ.
ಯಾರಿಗೆಲ್ಲ ಈ ಭರ್ಜರಿ ಗಿಫ್ಟ್
ಮಹೀಂದ್ರ ಥಾರ್ ಎಸ್ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಭಾರತ ಯುವ ಆಟಗಾರರಾದ ಟಿ ನಟರಾಜನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿಯನ್ನು ಹೆಸರಿಸಿದ್ದಾರೆ. ಟ್ವಿಟರ್ನಲ್ಲಿ ಕೆಲವರು ರಿಷಭ್ ಪಂತ್ಗೂ ಗಿಫ್ಟ್ ನೀಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಅಂದ್ಹಾಗೆ ಈ ಥಾರ್ ಎಸ್ಯುವಿ ಜೀಪ್ನ ಬೆಲೆ 12.10 - 14.15 ಲಕ್ಷ ರೂ.

ಸ್ವಂತ ಖರ್ಚಿನಲ್ಲಿ ದುಬಾರಿ ಗಿಫ್ಟ್
ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, 'ಆರು ಯುವ ಆಟಗಾರರು ಇತ್ತೀಚಿನ ಐತಿಹಾಸಿಕ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದರು (ಶಾರ್ದೂಲ್ ಠಾಕೂರ್ ಮೊದಲೇ ಆಡಿ ಮತ್ತೆ ಗಾಯಕ್ಕೀಡಾದರು). ಇವರೆಲ್ಲ ಭಾರತದ ಭವಿಷ್ಯದ ಕನಸು ಮತ್ತು ಅಸಾಧ್ಯವನ್ನು ಸಾಧ್ಯ ಅನ್ನಿಸುವವರು. ಪಾದಾರ್ಪಣೆ ಮಾಡಿದ ಎಲ್ಲಾ ಆರು ಆಟಗಾರರಿಗೆ ಕಂಪನಿಯ ವೆಚ್ಚವಲ್ಲದೆ ಸ್ವತಃ ನನ್ನ ಹಣದಿಂದ ಥಾರ್ ಎಸ್ಯುವಿ ಗಿಫ್ಟ್ ನೀಡಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications












