ಹೈದರಾಬಾದ್, ಜೂ.24: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಇಂಗ್ಲೆಂಡ್ ವಿರುದ್ಧ ಸರಣಿಗೆ ತೆರಳುತ್ತಿದ್ದಂತೆ ಇಲ್ಲಿ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಂಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ನಡೆದುಕೊಂಡಿರುವ ಕಾರಣಕ್ಕಾಗಿ ಎಂಎಸ್ ಧೋನಿ ಅವರನ್ನು ಬಂಧಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ವಾರೆಂಟ್ ಜಾರಿಗೊಳಿಸಿದೆ.
ಮಹೇಂದ್ರ ಸಿಂಗ್ ಧೋನಿ ವಿರುದ್ಧ ವಿಚಾರಣೆ ನಡೆಸಿದ ಅನಂತಪುರದ ನ್ಯಾಯಾಲಯ ಈ ರೀತಿ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಖುದ್ದು ಹಾಜರಾಗುವಂತೆ ಧೋನಿ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು.
ಆದರೆ, ಮಹೇಂದ್ರ ಸಿಂಗ್ ಧೋನಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಈ ರೀತಿ ಬಂಧನ ವಾರೆಂಟ್ ನೀಡಲಾಗಿದ್ದು ಜುಲೈ 16ರೊಳಗೆ ಧೋನಿಯನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಸೂಚಿಸಿದೆ.

ಮ್ಯಾಗಜೀನ್ ವೊಂದರಲ್ಲಿ ಎಂಎಸ್ ಧೋನಿ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕಪಡಿಸಿ ದೂರು ಸಲ್ಲಿಸಲಾಗಿತ್ತು. 2013ರ ಏಪ್ರಿಲ್ ಸಂಚಿಕೆಯ ಬಿಸಿನೆಸ್ ಟುಡೆ ಮ್ಯಾಗಜೀನ್ ನಲ್ಲಿ ಧೋನಿಯನ್ನು ಮಹಾವಿಷ್ಣುವಿನಂತೆ ಚಿತ್ರಿಸಿ 'God of Big Deals' ಎಂದು ಶೀರ್ಷಿಕೆ ನೀಡಲಾಗಿತ್ತು.
ಹತ್ತು ಹಲವು ಕಂಪನಿಗಳ ಉತ್ಪನ್ನಗಳನ್ನು ಕೈಯಲ್ಲಿ ಹಿಡಿದಿರುವ ವಿಷ್ಣುರೂಪಿ ಧೋನಿಯವರ ಒಂದು ಕೈಯಲ್ಲಿ ಶೂ ಕೂಡಾ ಇತ್ತು.[ಅಂಗ್ಲರ ಬೇಟೆಗೆ ಹೊರಟ ಧೋನಿ ಪಡೆ]
ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ಮುಖಂಡರಾದ ವೈ. ಶ್ಯಾಮ್ ಸುಂದರ್ ಅವರು ಎಂಎಸ್ ಧೋನಿ ವಿರುದ್ಧ ಪಿಟೀಷನ್ ಸಲ್ಲಿಸಿದ್ದರು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಧೋನಿ ಕಾಣಿಸಿಕೊಂಡಿರುವುದಕ್ಕೆ ದೂರು ಸಲ್ಲಿಸಲಾಗಿದೆ ಎಂದು ಶ್ಯಾಮ್ ಸುಂದರ್ ಹೇಳಿದ್ದಾರೆ.
ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆದು ಕೋರ್ಟ್ ಮೇಲ್ಕಂಡ ಆದೇಶ ನೀಡಿದೆ. ಧೋನಿ ವಿರುದ್ಧ ಇದೇ ರೀತಿಯ ದೂರುಗಳು ದೆಹಲಿ, ಪುಣೆ ಹಾಗೂ ಇನ್ನಿತರ ನಗರಗಳಲ್ಲಿ ಹಾಕಲಾಗಿದೆ.
ವಿಷ್ಣುವಿನ ರೂಪದಲ್ಲಿರುವ ಧೋನಿ ಕೈಯಲ್ಲಿ ತಾನು ರಾಯಭಾರಿಯಾಗಿರುವ ಲೇಸ್ ಪ್ಯಾಕೆಟ್, ಪೆಪ್ಸಿ ಬಾಟೆಲ್, ಏರ್ಸೆಲ್ ಸಿಮ್, ಮೊಬೈಲ್, ಬೂಸ್ಟ್, ಇಂಜಿನ್ ಆಯಿಲ್ ಕ್ಯಾನ್ ಹಾಗೂ ರಿಬಾಕ್ ಷೂ ಹಿಡಿದಿರುವಂತೆ ವಿನ್ಯಾಸಗೊಳಿಸಿದ ಚಿತ್ರ ಏಪ್ರಿಲ್ 2ರಂದು ಪ್ರಕಟಗೊಂಡಿತ್ತು.
ಈ ಸಂಬಂಧ ಬೆಂಗಳೂರಿನ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಧೋನಿ ಸೇರಿದಂತೆ ಆಂಗ್ಲ ಪಾಕ್ಷಿಕ ಪತ್ರಿಕೆಯ 5 ಸಂಪಾದಕರ ವಿರುದ್ಧ ಐಪಿಸಿ 295ನೇ ಕಲಂ ಅಡಿಯಲ್ಲಿ ಆರ್ ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಎಂಬುವರು ಕೂಡಾ ಖಾಸಗಿ ದೂರು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.