
ಲಂಡನ್, ಆಗಸ್ಟ್ 10: ಕಳೆದ ತಿಂಗಳಷ್ಟೇ ಶ್ರೀಲಂಕಾದಲ್ಲಿ ನಡೆದಿದ್ದ (ಶ್ರೀಲಂಕಾ ವಿರುದ್ಧದ) ಅಂಡರ್-19 ಯೂತ್ ಟೆಸ್ಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಸರಣಿ ಗೆದ್ದಿದ್ದ ಅರ್ಜುನ್ ತೆಂಡೂಲ್ಕರ್, ಲಾರ್ಡ್ಸ್ ಮೈದಾನದ ಸಿಬ್ಬಂದಿಗಳ ಜೊತೆ ಕೆಲಸದಲ್ಲಿ ಕೈ ಸೇರಿಸಿ ಕ್ರೀಡಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಲಾರ್ಡ್ಸ್ ನಲ್ಲಿ ಶುಕ್ರವಾರ (ಆಗಸ್ಟ್ 10) ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್ ವೇಳೆ ಮಳೆ ಸುರಿಯ ತೊಡಗಿತು. ಪಿಚ್ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳ ನಡುವೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅಸಲಿಗೆ ಅರ್ಜುನ್ ಶುಕ್ರವಾರ ಸಿಂಬಂದಿಗಳ ಜೊತೆ ಮೈದಾನ ನಿರ್ವಹಣೆ ಕೆಲಸಕ್ಕೆ ಹಾಜರಾಗಿದ್ದರು.
ಗ್ರೌಂಡ್ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೂ ಮುನ್ನ ಅರ್ಜುನ್ ಎಂಸಿಸಿ ಯಂಗ್ ಕ್ರಿಕೆಟರ್ಸ್ (ಎಂಸಿಸಿವೈಸಿ) ನಿಂದ ಕೌಶಲಗಳನ್ನು ಕಲಿಯುವ ಮೂಲಕ ಗಮನ ಸೆಳೆದಿದ್ದರು. ಅರ್ಜುನ್ ಸರಳತೆ ಶ್ಲಾಘಿಸಿರುವ ಎಂಸಿಸಿವೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಬರೆದುಕೊಂಡಿದೆ.
'ಎಂಸಿಸಿವೈಸಿ4ಎಲ್ ನಿಂದ ಇತ್ತೀಚೆಗೆ ಅರ್ಜುನ್ ತರಬೇತಿ ಪಡೆದಿದ್ದಷ್ಟೇ ಅಲ್ಲ, ಅದರ ಜೊತೆಗೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಸಿಬ್ಬಂದಿಗಳ ಜೊತೆ ಕೈ ಸೇರಿಸುವ ಮೂಲಕವೂ ಪ್ರೀತಿಗೆ ಪಾತ್ರರಾಗಿದ್ದಾರೆ' ಎಂದು ಎಂಸಿಸಿವೈಸಿ ತನ್ನ ಟ್ವಿಟರ್ ನಲ್ಲಿ ಹೇಳಿಕೊಂಡಿದೆ.