
ಕೊಲಂಬೋ, ಅಕ್ಟೋಬರ್ 29: ಶ್ರೀಲಂಕಾದ ಪೆಟ್ರೋಲಿಯಂ ಸಚಿವ, ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅವರನ್ನು ಶೂಟಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿ ಸೋಮವಾರ (ಅಕ್ಟೋಬರ್ 29) ಬಂಧಿಸಲಾಗಿದೆ.
ಕೊಲಂಬೋ ಕ್ರೈಂ ಡಿವಿಷನ್ (ಸಿಸಿಡಿ) ಮಾಜಿ ನಾಯಕ ರಣತುಂಗ ಅವರನ್ನು ಬಂಧಿಸಿದೆ. ಭಾನುವಾರ (ಅಕ್ಟೋಬರ್ 28) ಕೊಲಂಬೋದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ) ಭಾಗದಲ್ಲಿ ರಾಜಕೀಯ ವಿಚಾರದ ತಿಕ್ಕಾಟದಲ್ಲಿ ರಣತುಂಗ ಅವರನ್ನು ಪಾರು ಮಾಡುವ ಸಲುವಾಗಿ ಅರ್ಜುನ್ ಅವರ ಅಂಗರಕ್ಷಕರು ಗುಂಡು ಹಾರಿಸಿದ್ದರು.
ಗುಂಡು ಹಾರಿಸಿದ್ದರಿಂದ ಮೂವರಲ್ಲಿ ಒಬ್ಬಾತ ತೀವ್ರ ಗಾಯಕ್ಕೊಳಗಾಗಿ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಗಿ ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ಪೆಟ್ರೋಲಿಯಂ ಕಾರ್ಮಿಕ ಸಂಘಟನೆಗಳು ಸಿಪಿಸಿ ಕಾರ್ಮಿಕನ ಸಾವಿಗೆ ಕಾರಣವಾದ ರಣತುಂಗ ಅವರನ್ನು ಬಂಧಿಸುವಂತೆ ಮುಷ್ಕರ ಹೂಡಿದ್ದವು.
ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ರಣತುಂಗ, 'ಅವರು ನನ್ನನ್ನು ಕೊಲ್ಲಲು ಬಂದಿದ್ದರು. ಬೇಕಾದರೆ ನೀವು ಸಿಸಿಟಿವಿ ಪರಿಶೀಲಿಸಬಹುದು. ಇದೇ ಮೊದಲಬಾರಿಗೆ ನಾನು ಅರೆಸ್ಟ್ ಆಗುತ್ತಿದ್ದೇನೆ. ನನ್ನ ಮಕ್ಕಳು, ಕುಟುಂಬವನ್ನು ನೆನೆದ ಬದುಕಿನ ಬಗ್ಗೆ ನನಗೆ ಭಯ ಶುರುವಾಗಿದೆ' ಎಂದಿದ್ದಾರೆ.