ಟೀಮ್ ಇಂಡಿಯಾ ಸ್ಟಾರ್ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ತಮ್ಮ ಒಡೆತನದ ಕಂಪನಿಯ ಉದ್ಯೋಗಿಗಳ ಪಿಎಫ್ ಹಣವನ್ನು ಪಾವತಿಸದೇ ವಂಚಿಸಿರುವ ಹಿನ್ನೆಲೆ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ವರದಿಗಳ ಪ್ರಕಾರ ರಾಬಿನ್ ಉತ್ತಪ್ಪ ಅವರು ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಹೆಸರಿನ ಖಾಸಗಿ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳ ಸಂಬಳದ ಪಿಎಫ್ ಹಣವನ್ನು ನೀಡಿಲ್ಲ. ಸುಮಾರು 23 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ರಾಬಿನ್ ಉತ್ತಪ್ಪ ವಂಚಿಸಿದ್ದಾರೆ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.
ಕಂಪನಿ ಉದ್ಯೋಗಿಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಫ್ಓ ರಿಜಿನಲ್ ಕಮಿಷನರ್ ಷಡಾಕ್ಷಿರಿ ರೆಡ್ಡಿ ಅವರು ಡಿಸೆಂಬರ್ 4 ರಂದು ಬೆಂಗಳೂರಿನ ಪುಲಕೇಶಿ ನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿ ಪೊಲೀಸರಿಗೆ ಬಂಧಿಸುವಂತೆ ಮನವಿ ಮಾಡಿದ್ದಾರೆ.

ಪ್ರಸ್ತುತ ರಾಬಿನ್ ಉತ್ತಪ್ಪ ಭಾರತವನ್ನು ತೊರೆದು ದುಬೈನಲ್ಲಿ ನೆಲಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಬಿನ್ ಉತ್ತಪ್ಪ ವಿರುದ್ಧ ಪುಲಕೇಶಿ ನಗರ ಠಾಣೆ ಪೊಲೀಸರು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಭಾರತ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಾಗ ತಂಡದಲ್ಲಿ ರಾಬಿನ್ ಉತ್ತಪ್ಪ ಇದ್ದರು. ಇದಕ್ಕೂ ಮುನ್ನ 2006 ರಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಉತ್ತಪ್ಪ ಪದಾರ್ಪಣೆ ಮಾಡಿದ್ದರು. ನಂತರ 2015ರಲ್ಲಿ ತಮ್ಮ ವೃತ್ತಿಜೀವನ ಕೊನೆ ಪಂದ್ಯವನ್ನು ಟೀಮ್ ಇಂಡಿಯಾ ಪರ ಆಡಿದ್ದರು. ಇದಾದ ಬಳಿಕ ಯುವ ಆಟಗಾರರ ಆಗಮನದಿಂದ ಉತ್ತಪ್ಪ ಅವರಿಗೆ ತಂಡದಲ್ಲಿ ಅವಕಾಶ ಸಿಗವುದು ಕಡಿಮೆಯಾಯಿತು. ಆದರೂ ಅವರು ಐಪಿಎಲ್ನಲ್ಲಿ ವಿವಿಧ ಫ್ರಾಂಚೈಸಿಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಈ ನಡುವೆ ಉತ್ತಪ್ಪ 2022ರ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದ ಬಳಿಕ ಅವರು ವೀಕ್ಷಕ ವಿವರಣೆಗಾರರಾಗಿ ಉತ್ತಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ವಾಸಿಸುತ್ತಿಲ್ಲ. ಭಾರತವನ್ನು ತೊರೆದು ಅವರು ದುಬೈನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಪಾಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡಿರುವ ಉತ್ತಪ್ಪ ಭಾರತವನ್ನು ತೊರೆಯಲು ಕಾರಣವನ್ನು ನೀಡಿದ್ದರು. ಈ ಕಾರಣ ತಿಳಿದ ಭಾರತೀಯರು ಅಚ್ಚರಿಗೊಂಡಿದ್ದರು.
'ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾಗು ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ದುಬೈನಲ್ಲಿ ನೆಲೆಸಿರುವುದಾಗಿ' ಉತ್ತಪ್ಪ ತಿಳಿಸಿದ್ದರು. ಉತ್ತಪ್ಪ ಕಳೆದೊಂದು ವರ್ಷದಿಂದ ಖಾಯಂ ಆಗಿ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಅವರು ಭಾರತದ ನಂಟನ್ನು ಕಳೆದುಕೊಂಡಿಲ್ಲ. ದೇಶದಲ್ಲಿ ನಡೆಯುವ ವಿವಿಧ ಲೀಗ್ ಪಂದ್ಯಗಳಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳಲುತ್ತಿದ್ದಾರೆ.