ಸಿಎಸ್ಕೆ-ಎಂಐ ಗೆಲುವು, ಆರ್ಸಿಬಿ ಸೋಲಿಗೆ ಕಾರಣ ಹೇಳಿದ ಆಶಿಷ್ ನೆಹ್ರಾ!

ಬೆಂಗಳೂರು, ಮೇ 9: ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಷ್ ನೆಹ್ರಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಐದು ವಿಭಿನ್ನ ತಂಡಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಯಾಕೆ ಅತೀ ಹೆಚ್ಚು ಯಶಸ್ವಿ ತಂಡಗಳಾಗಿ ಗುರುತಿಸಿಕೊಂಡಿವೆ ಎಂಬುದಕ್ಕೆ ನೆಹ್ರಾ ಪ್ರಮುಖ ಕಾರಣಗಳನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾಕೆ ವೈಫಲ್ಯ ಅನುಭವಿಸುತ್ತಿದೆ ಎಂಬುದನ್ನೂ ನೆಹ್ರಾ ತಿಳಿಸಿದ್ದಾರೆ.
ಭಾರತದ ಮಾಜಿ ನಾಯಕ, ಕರ್ನಾಟಕ ಬ್ಯಾಟ್ಸ್ಮನ್, ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಗೆ ಕಾರಣಗಳೇನು ಎಂಬುದಕ್ಕೆ ವಿವರಣೆ ನೀಡಿದ್ದರು. ನೆಹ್ರಾ ಕೂಡ ಅಂಥದ್ದೇ ವಿಚಾರಗಳನ್ನು ಹರವಿಕೊಂಡಿದ್ದಾರೆ.
ಚೆನ್ನೈ ಮತ್ತು ಮುಂಬೈ ಗೆಲುವು, ಬೆಂಗಳೂರು ತಂಡ ಸೋಲಿಗೆ ಆಶಿಷ್ ನೆಹ್ರಾ ಕೊಟ್ಟಿರುವ ಕಾರಣಗಳು ಕೆಳಗಿವೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಜೊತೆ ಮಾತನಾಡುತ್ತ ನೆಹ್ರಾ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಚೆನ್ನೈ ಗೆಲುವಿಗೆ ಕಾರಣ
ತಾನು ಹೆಚ್ಚಾಗಿ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡಿದ್ದರಿಂದ ಸಿಎಸ್ಕೆಯನ್ನು ತನಗೆ ಹೆಚ್ಚು ಖುಷಿಕೊಡುವ ತಂಡವಾಗಿ ಆರಿಸಿದ ನೆಹ್ರಾ, ಸಿಎಸ್ಕೆ ಯಶಸ್ವಿಗೆ ಅಲ್ಲಿನ ವಾತಾವರಣ ಕಾರಣ ಎಂದಿದ್ದಾರೆ. 'ಸಿಎಸ್ಕೆ ತಂಡದಲ್ಲಿರುವ ವಾತಾವರಣ ವಿಭಿನ್ನವಾಗಿದೆ. ಇದೇ ಕಾರಣಕ್ಕೆ ಚೆನ್ನೈ ಬರೀ ಯಶಸ್ವಿ ತಂಡವಾಗಿಲ್ಲ, ಗೆಲುವಿನ ಸ್ಥಿರ ತಂಡವಾಗಿಯೂ ಗುರುತಿಸಿಕೊಂಡಿದೆ,' ಎಂದು ನೆಹ್ರಾ ಹೇಳಿದ್ದಾರೆ.

ಚೆನ್ನೈ ಅತೀ ಬಲಿಷ್ಠ ಯಾಕೆ?
ಐಪಿಎಲ್ ಪ್ರತೀ ಸೀಸನ್ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ಒಟ್ಟಿಗೆ 5 ಬಾರಿ ರನ್ನರ್ಸ್ ಆಗಿಯೂ ಗಮನ ಸೆಳೆದಿತ್ತು. ಹೀಗಾಗಿ ಐಪಿಎಲ್ನಲ್ಲಿ ಅತೀ ಬಲಿಷ್ಠ ತಂಡವಾಗಿ ಚೆನ್ನೈ ಗುರುತಿಸಿಕೊಂಡಿದೆ.

ಸಿಎಸ್ಕೆ ಸ್ಥಿರ ಯಶಸ್ಸಿನ ಗುಟ್ಟು
'ಸಿಎಸ್ಕೆ ತಂಡ ಸ್ಥಿರ ಯಶಸ್ವಿಗೆ ಕಾರಣ ಇಂಡಿಯಾ ಸಿಮೆಂಟ್. ಅವರು ದಕ್ಷಿಣ ಭಾರತದಲ್ಲಿ ಬಹಳ ವರ್ಷದಿಂದಲೂ ಕ್ರಿಕೆಟ್ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಆಟ ಗೊತ್ತಿದೆ. ಇದಕ್ಕೂ ಮೇಲಾಗಿ ಹೇಳುವುದೆಂದರೆ ಸಿಎಸ್ಕೆಗೆ ಎಂಎಸ್ ಧೋನಿಯಂತ ನಾಯಕರು ಲಭಿಸಿದ್ದಾರೆ,' ಎಂದು ನೆಹ್ರಾ ವಿವರಿಸಿದರು.

ಎಂಐ ತಂಡದ ಪ್ಲಸ್ ಪಾಯಿಂಟ್ಸ್
ಮಾತು ಮುಂದುವರೆಸಿದ ನೆಹ್ರಾ, 'ಮುಂಬೈ ಇಂಡಿಯನ್ಸ್ಗೆ ಕೂಡ ಗೆಲುವಿನ ಗುಟ್ಟು ಗೊತ್ತಿದೆ. ಆ ತಂಡದಲ್ಲಿರುವ ಪಾಂಡ್ಯ ಬ್ರದರ್ಸ್, ಜಸ್ಪ್ರೀತ್ ಬೂಮ್ರಾ, ರೋಹಿತ್ ಶರ್ಮಾ ಮತ್ತು ಕೀರನ್ ಪೊಲಾರ್ಡ್ ಅವರನ್ನು ನೋಡಿ. ಇಂಥ ಆಟಗಾರರನ್ನು ಎಂಐ ಅನೇಕ ವರ್ಷಗಳಿಂದ ತನ್ನಲ್ಲೇ ಉಳಿಸಿಕೊಂಡಿದೆ. ಒಂದು ಸೀಸನ್ನಲ್ಲಿ ಆಡಿದ್ದ ಝಹೀರ್ ಈಗ ಅಲ್ಲಿ ಕೋಚ್ ಆಗಿದ್ದಾರೆ. ಈ ತಂಡಕ್ಕೆ ಸಚಿನ್ ಮಾರ್ಗದರ್ಶನವೂ ಇದೆ,' ಎಂದರು.

ಆರ್ಸಿಬಿಯಲ್ಲಿರುವ ಹುಳುಕೇನು?
ತಂಡದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡುತ್ತಲೇ ಇರುವ ಆರ್ಸಿಬಿಯನ್ನು ನೆಹ್ರಾ ಟೀಕಿಸಿದ್ದಾರೆ. 'ಆರ್ಸಿಬಿ ಒಂದು ಬಲಿಷ್ಠ ತಂಡ ಆದರೂ ಅದು ನಲುಗುತ್ತಿದೆ. 3 ವರ್ಷಗಳಿಗೆ ಹಿಂದೆ ಅದರ ಮ್ಯಾನೇಜ್ಮೆಂಟ್ ಬದಲಾಗಿತ್ತು. ಇದೀಗ ಮತ್ತೆ ಬದಲಾಗಿದೆ,' ಎಂದಿದ್ದಾರೆ. ಅಂದ್ಹಾಗೆ ಐಪಿಎಲ್ನಲ್ಲಿ ಟ್ರೋಫಿ ಗೆಲ್ಲದ ತಂಡಗಳೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications