
ದುಬೈ, ಸೆಪ್ಟೆಂಬರ್ 26: ನಿರಂತರವಾಗಿ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದ್ದ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದಿದ್ದು ಎಡಗೈ ಬ್ಯಾಟ್ಸ್ಮನ್ ರವೀಂದ್ರ ಜಡೇಜಾ.
ಕೊನೆಯ ಓವರ್ನಲ್ಲಿ ಒಂದೇ ವಿಕೆಟ್ ಉಳಿದಿದ್ದರಿಂದ ಪಂದ್ಯವನ್ನು ಗೆಲ್ಲಿಸುವ ಸಂಪೂರ್ಣ ಹೊಣೆಗಾರಿಕೆ ಜಡೇಜಾ ಮೇಲಿತ್ತು. ಸ್ಕೋರ್ ಸಮನಾದಾಗ ಗೆಲ್ಲಲು ಒಂದು ರನ್ ಅವಶ್ಯಕತೆ ಇತ್ತು. ಇನ್ನೂ ಎರಡು ಎಸೆತ ಬಾಕಿ ಇದ್ದಿದ್ದರಿಂದ ಜಡೇಜಾ ಸ್ವಲ್ಪ ತಾಳ್ಮೆ ವಹಿಸಿ ಆಡಿದ್ದರೆ ಭಾರತ ಗೆಲ್ಲಬಹುದಾಗಿತ್ತು.
ಆದರೆ, ಆತುರ ತೋರಿದ ಜಡೇಜಾ, ಅನಗತ್ಯವಾಗಿ ಚೆಂಡನ್ನು ಆಗಸಕ್ಕೆ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಎರಡೂ ತಂಡಗಳಿಗೆ 'ಟೈ' ಸಮಾಧಾನ ನೀಡಿದರು.
ವಿಶೇಷವೆಂದರೆ ಜಡೇಜಾ ಪಂದ್ಯ ಟೈ ಆಗುವಂತೆ ಮಾಡಿರುವುದು ಇದು ಮೊದಲನೇನಲ್ಲ. ಈ ಹಿಂದೆಯೂ ಭಾರತ ಟೈ ಸಾಧಿಸಲು ಜಡೇಜಾ ಕಾರಣರಾಗಿದ್ದರು.
2014ರಲ್ಲಿ ಆಕ್ಲೆಂಡ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಗೆಲುವಿನ ಹಂತಕ್ಕೆ ಕೊಡೊಯ್ದಿದ್ದ ಜಡೇಜಾ, ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆ ಪಂದ್ಯದಲ್ಲಿಯೂ ಕೊನೆಯ ಓವರ್ನಲ್ಲಿ ಕೈಯಲ್ಲಿ ಒಂದೇ ವಿಕೆಟ್ ಇತ್ತು ಎನ್ನುವುದು ಗಮನಾರ್ಹ.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 314 ರನ್ ಗಳಿಸಿತ್ತು.
ಈ ಗುರಿ ಬೆನ್ನತ್ತಿದ್ದ ಭಾರತ 9 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿತ್ತು. ಉತ್ತಮ ಆರಂಭ ದೊರೆತರೂ ಸತತ ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ ತುಸು ಚೇತರಿಕೆಯ ಆಟ ನೀಡಿದ್ದರೆ, ಧೋನಿ ಅರ್ಧಶತಕ ಗಳಿಸಿದ್ದರು.
ಬಳಿಕ ಆರ್. ಅಶ್ವಿನ್ ಮತ್ತು ಜಡೇಜಾ ಜೋಡಿ ಭರ್ಜರಿ ಆಟ ಪ್ರದರ್ಶಿಸಿತ್ತು. ಅಶ್ವಿನ್ 46 ಎಸೆತಗಳಲ್ಲಿ 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಅದರ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಮತ್ತು ಮೊಹಮದ್ ಶಮಿ ಔಟಾದರು. ಕೊನೆಯಲ್ಲಿ ವರುಣ್ ಆರನ್ ಅವರೊಂದಿಗೆ ಹೋರಾಟ ನಡೆಸಿದ್ದ ಜಡೇಜಾ 45 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 66 ರನ್ ಗಳಿಸಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಜಡೇಜಾ ಬಾಲಂಗೋಚಿಗಳ ಜತೆಗೂಡಿ ಹೋರಾಟ ನಡೆಸಿದ್ದರು. ಭಾರತ ಇತ್ತೀಚೆಗೆ ಏಕದಿನ ಪಂದ್ಯದಲ್ಲಿ ಸಾಧಿಸಿದ ಎರಡೂ 'ಟೈ'ಗಳಲ್ಲಿ ಜಡೇಜಾ ಅವರೇ ಇರುವುದು ಕಾಕತಾಳೀಯ.