ದುಬೈ, ಸೆಪ್ಟೆಂಬರ್ 21: ಭಾರತ-ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಅಂಗಳದ ವೈಷಮ್ಯ ಐತಿಹಾಸಿಕ ಆದರೆ ಬಾಂಗ್ಲಾದೇಶ ಸಹ ಭಾರತದೊಂದಿಗೆ ಕ್ರಿಕೆಟ್ ಅಂಗಳದಲ್ಲಿ ವೈಷಮ್ಯ ಸಾಧಿಸಲು ಹಿಂದೆಯೇನೂ ಬಿದ್ದಿಲ್ಲ.
ಇಂದು ಭಾರತ ತಂಡವು ಏಷ್ಯಾಕಪ್ 2018ರ ಸೂಪರ್-4 ಘಟ್ಟದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಕೆಲವು ವರ್ಷಗಳ ಹಿಂದೆ ಅಪಕ್ವ ತಂಡ ಎನಿಸಿಕೊಂಡಿದ್ದ ಬಾಂಗ್ಲಾದೇಶ ಈಗ ಕ್ರಿಕೆಟ್ನ ಎಲ್ಲ ವಿಭಾಗದಲ್ಲಿ ಮಾಗಿ ನಿಂತಿದೆ. ಅದು ವಿಶ್ವದರ್ಜೆಯ ಏಕದಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ಹಾಗಾಗಿ ಬಾಂಗ್ಲಾವನ್ನು ಭಾರತ ಲಘುವಾಗಿ ಪರಿಗಣಿಸುವಂತೆ ಇಲ್ಲ.
ವಿಶ್ವಾಸದಲ್ಲಿ ಭಾರತ, ಒತ್ತಡದಲ್ಲಿ ಬಾಂಗ್ಲಾ, ಗಾಯಾಳುಗಳ ಸಮಸ್ಯೆ
ದುಬೈ ಪಿಚ್ ಬಾಂಗ್ಲಾದೇಶಕ್ಕೆ ಸ್ವದೇಶಿ ಪಿಚ್ನಂತೆಯೇ ಇದೆ. ಇತ್ತಂಡಗಳ ನಡುವಿನ ಈ ಪಂದ್ಯ ಹೈವೋಲ್ಟೇಜ್ ಪಂದ್ಯವೆಂದೇ ಪರಿಗಣಿತವಾಗಿದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇದ್ದಷ್ಟು ಕಾತರತೆ ಈ ಪಂದ್ಯಕ್ಕೆ ಇರದಿದ್ದರೂ ಸಹ ಕ್ರೀಡಾಂಗಣ ಎರಡೂ ದೇಶದ ಬೆಂಬಲಿಗರಿಂದ ತುಂಬುವ ವಿಶ್ವಾಸವಿದೆ.
ಎರಡೂ ತಂಡಗಳು ಎದುರಾಗಿದ್ದು ಯಾವಾಗ?
ಎರಡೂ ತಂಡಗಳು ಕೊನೆಯ ಬಾರಿ ಎದುರಾಗಿದ್ದ ಇದೇ ವರ್ಷಾರಂಭದಲ್ಲಿ ನಡೆದ ನಿಧಹಾಸ್ ಟಿ20 ಟೂರ್ನಿಯಲ್ಲಿ. ಕೊನೆಯ ಬಾಲ್ನಲ್ಲಿ ಗೆಲ್ಲಲು ಐದು ರನ್ ಬೇಕಿದ್ದಾಗ ದಿನೇಶ್ ಕಾರ್ತಿಕ್ ಭರ್ಜರಿ ಸಿಕ್ಸರ್ ಭಾರಿಸಿ ಬಾಂಗ್ಲಾಕ್ಕೆ ಸೋಲುಣಿಸಿದ್ದನ್ನು ಕ್ರಿಕೆಟ್ ಪ್ರೇಮಿಗಳು ಮರೆತಿಲ್ಲ.
2016ರಲ್ಲಿ ಬೆಂಗಳೂರಲ್ಲಿ ನಡೆದ ವಿಶ್ವಟಿ20 ಪಂದ್ಯವನ್ನು ಭಾರತವು ಒಂದು ರನ್ನಿಂದ ಗೆದ್ದುಕೊಂಡದ್ದನ್ನು ಮರೆಯಲಾದರೂ ಸಾಧ್ಯವೇ. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿದ್ದಾಗ ಧೋನಿ ಓಡುತ್ತಾ ಬಂದು ರನ್ಔಟ್ ಮಾಡಿದ್ದು ಭಾರತ ಕ್ರಿಕೆಟ್ ಪ್ರೇಮಿಗಳು ಎರಡು ವರ್ಷವಾದರೂ ಮರೆತಿಲ್ಲ.
ಆದರೆ ಇಂದಿನ ಪಂದ್ಯದಲ್ಲಿ ಭಾರತಕ್ಕೆ ಆಡುವ 11 ಜನರ ಆಯ್ಕೆ ತಲೆನೋವಾಗಿದೆ. ಹಾರ್ದಿಕ್ ಪಾಂಡ್ಯಾ ಗಾಯಗೊಂಡು ಸರಣಿಯಿಂದ ಹೊರಹೋಗಿದ್ದರೆ. ಗಾಯದಿಂದ ವಾಪಸ್ ಆಗಿರುವ ಭುವನೇಶ್ವರ್ ಕುಮಾರ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರಿಬ್ಬರ ಸ್ಥಾನ ತುಂಬುವರು ಯಾರು ಎಂಬುದು ಕುತೂಹಲಕಾರಿ.
ಸಂಭವನೀಯ ಆಡುವ 11 ಆಟಗಾರರ ಪಟ್ಟಿ
ಹಾರ್ದಿಕ್ ಪಾಂಡ್ಯಾ ಸರಣಿಯಿಂದ ಹೊರಗೆ ಹೋಗಿದ್ದರೆ ಭುವನೇಶ್ವರ್ ಕುಮಾರ್ ಸಹ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಭುವನೇಶ್ವರ್ ಕುಮಾರ್ ಸ್ಥಾನವನ್ನು ಕಲೀಲ್ ಅಹ್ಮದ್ ತುಂಬುವ ಸಾಧ್ಯತೆ ಇದೆ. ಆದರೆ ಹಾರ್ದಿಕ್ ಪಾಂಡ್ಯಾ ಸ್ಥಾನ ತುಂಬುವರು ಯಾರೂ ಎಂಬುದು ಕುತೂಹಲ.
ಒಂದರ ಹಿಂದೊಂದು ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ ಆಟಗಾರರ ಗಾಯದ ಪರಿಸ್ಥಿತಿ ಬಗ್ಗೆ ಚಿಂತಾಕ್ರಾಂತವಾಗಿದೆ. ಈಗಾಗಲೇ ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಸರಣಿಯಿಂದ ಹೊರಗುಳಿದಿದ್ದಾರೆ. ಸತತ ಪಂದ್ಯಗಳ ಒತ್ತಡ ಹಾಗೂ ಅತೀವವಾದ ಬಿಸಿಲಿನಿಂದ ಇನ್ನಷ್ಟು ಆಟಗಾರರು ಗಾಯಾಳುಗಳಾಗುವ ಭೀತಿ ಬಾಂಗ್ಲಾವನ್ನು ಕಾಡುತ್ತಿದೆ.
'ನಿನ್ನೆಯಷ್ಟೆ ಅಬುದಾಬಿಯಲ್ಲಿ ಆಡಿರುವ ನಾವು ಇಂದು ದುಬೈಗೆ ಪ್ರಯಾಣ ಬೆಳೆಸಿ ಬಂದು, ಇಲ್ಲಿ ಅಭ್ಯಾಸ ಮಾಡಿ ಪಂದ್ಯ ಆಡಬೇಕಿದೆ. ಅದೂ 40 ಡಿಗ್ರಿ ವಾತಾವರಣದಲ್ಲಿ' ಎಂದು ಬಾಂಗ್ಲಾ ನಾಯಕ ಮೊರ್ತಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಸಂಭಾವ್ಯ ಆಟಗಾರರು
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ಕೀಪರ್), ಕೇದಾರ್ ಜಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.
ಬಾಂಗ್ಲಾದೇಶ ತಂಡದ ಸಂಭಾವ್ಯ ಆಟಗಾರರು
ಲಿತೋನ್ ದಾಸ್ (ಕೀಪರ್), ಶಕಿಬ್ ಅಲ್ ಹಸನ್, ಮಶ್ಫಿಕುರ್ ರಹೀಮ್, ಮೊಹಮ್ಮದ್ ಮಿತುನ್ , ಮೊಹಮ್ಮದಹಾಲ್, ಮುಸಾದ್ದೆಕ್ ಹುಸೇನ್, ಮೆಹದೇ ಹಸನ್, ಮುಷ್ರಫೆ ಮೊರ್ತಾಜಾ (ನಾಯಕ), ರುಬೇಲ್ ಹುಸೇನ್, ಮುಸ್ತಫಿಜುರ್ ರೆಹಮಾನ್, ಆರಿಫುಲ್ ಹಕೀ.
ಪಂದ್ಯ ಪ್ರಾರಂಭ: ಸಂಜೆ 5 ಗಂಟೆ
ಲೈವ್: star sports
ಲೈವ್ ಸ್ಟ್ರೀಮಿಂಗ್: hotstar.com