
ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ನಲ್ಲಿ ಸೆಣೆಸಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ರಿಷಭ್ ಪಂತ್ಗೆ ಸ್ಥಾನ ದೊರೆತಿಲ್ಲ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಮಧ್ಯೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಸಾಕಷ್ಟು ಕುತೂಹಕಲ ಮೂಡಿಸಿತ್ತು. ಅಂತಿಮವಾಗಿ ಮ್ಯಾನೇಜ್ಮೆಂಟ್ ಅನುಭವಿ ದಿನೇಶ್ ಕಾರ್ತಿಕ್ ಮೇಲೆ ಭರವಸೆಯಿಟ್ಟಿದ್ದು ಪಂತ್ ಬೆಂಚ್ ಕಾಯಬೇಕಾಗಿದೆ.
ಇನ್ನು ಯುವ ಆಟಗಾರ ರಿಷಭ್ ಪಂತ್ಗೆ ಅವಕಾಶ ದೊರೆಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಪಂತ್ ಇಲ್ಲದೆ ಈ ಪಂದ್ಯ ಆಡುತ್ತಿರುವುದು ಬೇಸರ ಮೂಡಿಸಿದೆ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದು ಈ ಪಂದ್ಯದಲ್ಲಿ ಪಂತ್ ಅವರಿಗೆ ಅವಕಾಶ ನೀಡದಿದ್ದರೆ ಅವರನ್ನು ಯುಎಇಗೆ ಕರೆದುಕೊಂಡಿದ್ದು ಯಾಕೆ ಎಂದು ಕೂಡ ಪ್ರಶ್ನಿಸಿದ್ದಾರೆ.
ಭಾರತ ಪಾಕಿಸ್ತಾನದ ವಿರುದ್ಧ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿಯುತ್ತಿದ್ದು ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಇದ್ದಾರೆ. ಆಲ್ರೌಂಡರ್ಗಳಾಗಿ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ. ಮೂವರು ವೇಗಿಗಳು ಕಣಕ್ಕಿಳಿಯುತ್ತಿದ್ದು ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್ಗೆ ಮೂರನೇ ವೇಗಿಯಾಗಿ ಆವೇಶ್ ಖಾನ್ ಸಾಥ್ ನೀಡಲಿದ್ದಾರೆ. ಯುಜುವೇಂದ್ರ ಚಾಹಲ್ ಸ್ಪಿನ್ನರ್ ಆಗಿ ತಂಡದಲ್ಲಿದ್ದಾರೆ.
ಇತ್ತೀಚೆಗೆ ಪಂತ್ ಅವರ ಪ್ರದರ್ಶನದ ಉತ್ತಮವಾಗಿತ್ತು ಎಂಬುದನ್ನು ಗಮನಿಸಬೇಕು. ಎಡಗೈ ಬ್ಯಾಟರ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಪಂದ್ಯಗಳಲ್ಲಿ ಕೆಲವು ನಿರ್ಣಾಯಕ ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ ಅನುಭವಿ ದಿನೇಶ್ ಕಾರ್ತಿಕ್ ಡೆತ್ ಓವರ್ಗಳಲ್ಲಿ ನಿಡಿರುವ ಕೆಲ ಪರಿಣಾಮಕಾರಿ ಪ್ರದರ್ಶನಗಳು ತಂಡಕ್ಕೆ ಇಂಥಾ ಪಂದ್ಯದಲ್ಲಿ ಅಗತ್ಯವಿದೆಯೆಂದು ಭಾವಿಸಿರುವ ಭಾರತ ತಂಡ ಈ ನಿರ್ಧಾರ ತೆಗೆದುಕೊಂಡಿದೆ.
ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆ), ಹಾರ್ದಿಕ್ ಪಾಂಡ್ಯ,
ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಬೆಂಚ್: ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ, ರವಿ ಬಿಷ್ಣೋಯ್
ಪಾಕಿಸ್ತಾನ ಆಡುವ ಬಳಗ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಹನವಾಜ್ ದಹಾನಿ
ಬೆಂಚ್: ಮೊಹಮ್ಮದ್ ಹಸನೈನ್, ಉಸ್ಮಾನ್ ಖಾದಿರ್, ಹಸನ್ ಅಲಿ, ಹೈದರ್ ಅಲಿ