
'ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲು' ಎನ್ನುವ ರೀತಿಯಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ದೃಷ್ಟಿಯಿಂದ ಅನೇಕ ಪ್ರಯೋಗಗಳನ್ನ ಮಾಡಿ ಏಷ್ಯಾಕಪ್ನಲ್ಲಿ ಕೈ ಸುಟ್ಟುಕೊಂಡಿದೆ. ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯ ಸೋಲುವ ಮೂಲಕ ಏಷ್ಯಾಕಪ್ ಕನಸು ಕೈ ಬಿಟ್ಟಿದೆ.
ಭಾರತ ಏಷ್ಯಾಕಪ್ ಫೈನಲ್ ತಲುಪಲು ಬುಧವಾರ ನಡೆಯಬೇಕಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲಬೇಕಿತ್ತು. ಆದ್ರೆ ಬ್ಯಾಟಿಂಗ್ ವೈಫಳ್ಯದಿಂದಾಗಿ ಕಡಿಮೆ ಮೊತ್ತ ಕಲೆಹಾಕಿದ್ದ ಅಫ್ಘಾನಿಸ್ತಾನ ಕೊನೆಯ ಓವರ್ವರೆಗೆ ವಿರೋಚಿತ ಹೋರಾಟ ಪ್ರದರ್ಶಿಸಿತು. ಆದ್ರೆ ಪಾಕಿಸ್ತಾನ ತಂಡವು ಒಂದು ವಿಕೆಟ್ಗಳ ರೋಚಕ ಗೆಲುವು ಪಡೆಯುವ ಮೂಲಕ ಭಾನುವಾರ (ಸೆ. 11) ನಡೆಯುವ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಫೈನಲ್ನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾ ವಿರುದ್ಧ ಫೈನಲ್ ಕಾದಾಟ ನಡೆಸಲಿದೆ.
ಇನ್ನು ಮತ್ತೊಂದೆಡೆ ಟೀಂ ಇಂಡಿಯಾ ಆಟಗಾರರ ನೈಜ ಸಾಮರ್ಥ್ಯವು ಈ ಸರಣಿಯಲ್ಲಿ ಬಹಿರಂಗಪಟ್ಟಿದೆ. ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಮಗಿಂತ ದುರ್ಬಲ ತಂಡಗಳ ಕೈಯಲ್ಲಿ ಸೋತ ನೋವು ನಮ್ಮನ್ನು ಕಾಡುತ್ತಿದ್ದರೂ.. ಟೈಟಲ್ ಫೇವರಿಟ್ ಆಗಿ ಕಣಕ್ಕಿಳಿದು ಬರಿಗೈನಲ್ಲಿ ಮನೆಗೆ ತೆರಳಲಿರುವ ಭಾರತಕ್ಕೆ ದೊಡ್ಡ ಪಾಠವಾಗಿದೆ.
ಸತತ ಗೆಲುವಿನಿಂದ ತೇಲಾಡುತ್ತಿದ್ದ ಆಟಗಾರರ ಹೆಮ್ಮೆ ಈ ಸೋಲಿನಿಂದ ದಿಢೀರ್ ಕುಸಿದಿದೆ.
ಐಪಿಎಲ್ ಬಹು ಯಶಸ್ವಿ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಹುಷಾರಾಗಿ ಇರಬೇಕು ಎಂಬುದರ ಸತ್ಯ ತಿಳಿದಿದೆ. ಆಟಗಾರರ ಜತೆಗೆ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಬಿಸಿಸಿಐ ಎಷ್ಟು ಸುಧಾರಿಸಿಕೊಳ್ಳಬೇಕು ಎಂಬುದು ತಿಳಿದು ಬಂದಿದೆ. ಎಲ್ಲಿ ಏಳಬೇಕು, ಎಲ್ಲಿ ಬೀಳಬೇಕು ಎಂಬುದರ ಪಾಠ ಕಲಿಸಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಅನಿರೀಕ್ಷಿತ ಸೋಲು ತಮಗೊಂದು ಪಾಠ ಎಂದಿದ್ದಾರೆ. ತಂಡದ ಸಂಯೋಜನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ಇದೆ ಎಂದು ಹೇಳಿದರು. ಯೋಜನೆಗಳ ಬದಲಾವಣೆಗಳು ಮತ್ತು ಆಟಗಾರರ ಸಾಮರ್ಥ್ಯದ ಬಗ್ಗೆ ಅವರಿಗೆ ಈಗ ಒಂದು ಅರ್ಥಪೂರ್ಣ ಚೌಕಟ್ಟು ತಿಳಿದಿದೆ.
ಈಗಾಗಲೇ ಭಾರತದ ಮೂವರು ಸ್ಪಿನ್ನರ್ಗಳು ಮತ್ತು ಮೂವರು ವೇಗಿಗಳ ಪ್ರಯೋಗ ವಿಫಲವಾಯಿತು. ಸಂಪ್ರದಾಯಕ್ಕಿಂತ ಭಿನ್ನವಾಗಿ, ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಗಳು, ವೇಗಿಗಳು, ಒಬ್ಬ ಪೇಸ್ ಆಲ್ರೌಂಡರ್ ಮತ್ತು ಸ್ಪಿನ್ ಆಲ್ರೌಂಡರ್ ಉತ್ತಮ ಆಲೋಚನೆಯಲ್ಲ. ಅದಕ್ಕೂ ಮಿಗಿಲಾಗಿ ನಂಬಿಕಸ್ಥ ವೇಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಯಾವಾಗ ಬೇಕಾದರು ಕೈ ಕೊಡಬಹುದು ಎಂದು ತಿಳಿದು ಬಂದಿದೆ. ಆಲ್ ರೌಂಡ್ ಪ್ರದರ್ಶನದೊಂದಿಗೆ ಪಾಕಿಸ್ತಾನದ ವಿರುದ್ಧ ಗೆದ್ದ ಹಾರ್ದಿಕ್ ನಂತರದ ಎರಡು ಪಂದ್ಯಗಳಲ್ಲಿ ದಯನೀಯವಾಗಿ ವಿಫಲರಾದರು. ಅವರನ್ನು ಮೂರನೇ ವೇಗಿ ಎಂದು ಪರಿಗಣಿಸುವುದು ಸರಿಯಲ್ಲ ಎಂಬುದು ಸತ್ಯ.
ರೋಹಿತ್ ತಂಡದಲ್ಲಿ ಫಿನಿಶರ್ ಪಾತ್ರ ಯಾರದ್ದು ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿದೆ. ಲೆಫ್ಟ್ ರೈಟ್ ಕಾಂಬಿನೇಷನ್ ಗೆ ದಿನೇಶ್ ಕಾರ್ತಿಕ್ ಅಲ್ಲ ರಿಷಬ್ ಪಂತ್ ತೆಗೆದುಕೊಂಡಿದ್ದು ಎಷ್ಟು ತಪ್ಪು ಎಂದು ತಿಳಿಯಿತು. ಬೌಲಿಂಗ್ ಸಾಮರ್ಥ್ಯ, ವೀಕ್ನೆಸ್ ಕೂಡ ಜಗಜ್ಜಾಹೀರಾಗಿದೆ. ಅದರಲ್ಲೂ ಕೊನೆಯ ಓವರ್ಗಳಲ್ಲಿ ಯಾರ ಸಾಮರ್ಥ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಇತ್ತು.
ನಾಲ್ವರು ವೇಗಿಗಳನ್ನು ತಂಡದಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ವೇಗಿಗಳ ಮೌಲ್ಯವನ್ನು ನಮಗೆ ಕಲಿಸಿದೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಬೌಲರ್ಗಳ ಅನುಪಸ್ಥಿತಿಯು ದೊಡ್ಡದಾಗಿ ಹೊಡೆತ ನೀಡಬಲ್ಲದು ಎಂದು ತಿಳಿದುಬಂದಿದೆ. ಹಾಗಾಗಿ ಈ ಸೋಲು ಭಾರತದ ಆಟಗಾರರಿಗೆ ಪಾಠವಾಗಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.