
ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಎಲ್ಲಾ ತಂಡಗಳು ಕೂಡ ತಮ್ಮ ತಂಡವನ್ನು ಈಗಾಗಲೇ ಘೋಷಣೆ ಮಾಡಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಆಘಾತವೊಂದು ಎದುರಾಗಿದ್ದು ತಂಡದ ಪ್ರಮುಖ ವೇಗಿ ಗಾಯದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಮಾಹಿತಿ ನೀಡಿದೆ.
ಶ್ರೀಲಂಕಾ ತ,ಡದ ವೇಗದ ಬೌಲರ್ ದುಷ್ಮಂತ ಚಮೀರಾ ಅಭ್ಯಾಸ ನಡೆಸುವ ವೇಳೆ ಗಾಯಗೊಂಡಿದ್ದಾರೆ. ಎಡಗಾಲಿನ ನೋವಿಗೆ ಒಳಗಾಗಿರುವ ಚಮೀರಾ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ಶವ್ರೀಲಂಕಾ ಸ್ಕ್ವಾಡ್ನಿಂದ ಹೊರಬಿದ್ದಿದ್ದಾರೆ. 30ರ ಹರೆಯದ ಈ ವೇಗಿಯ ಬದಲಿಗೆ ನುವಾನ್ ತುಷಾರ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 20ರಂದು ಶ್ರೀಲಂಕಾ ಏಷ್ಯಾ ಕಪ್ನಲ್ಲಿ ಭಾಗವಹಿಸುವ 20 ಸದಸ್ಯರ ಬಳಗವನ್ನು ಘೋಷಣೆ ಮಾಡಿತ್ತು. ಶ್ರೀಲಂಕಾ ತಂಡವು ಆಗಸ್ಟ್ 24 ರಂದು ಏಷ್ಯಾ ಕಪ್ಗೆ ಭಾಗವಹಿಸುವ ಹಿನ್ನೆಲೆಯಲ್ಲಿ ಯುಎಇಗೆ ಪ್ರಯಾಣ ಬೆಳೆಸಲಿದೆ.
ಭಾರತ ತಂಡದ ಪ್ರಮುಖ ವೇಗಿ ಅಲಭ್ಯ: ಮುಂದಿನ ಶನಿವಾರ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ನಲ್ಲಿ ಭಾಗವಹಿಸುವ ಭಾರತ ತಂಡವನ್ನು ಕೂಡ ಘೋಷಣೆ ಮಾಡಲಾಗಿದೆ. ಆದರೆ ಈ ಟೂರ್ನಿಯಲ್ಲಿ ಭಾರತದ ಪ್ರಮುಖ ವೇಗಿಯಾದ ಜಸ್ಪ್ರೀತ್ ಬೂಮ್ರಾ ಭಾಗಿಯಾಗುತ್ತಿಲ್ಲ. ಬೂಮ್ರಾ ಕೂಡ ಗಾಯಕ್ಕೆ ತುತ್ತಾಗಿದ್ದು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಮತ್ತೋರ್ವ ವೇಗದ ಬೌಲರ್ ಹರ್ಷಲ್ ಪಟೇಲ್ ಕೂಡ ಗಾಯದಿಂದಾಗಿ ಈ ಟೂರ್ನಿಗೆ ಅಲಭ್ಯವಾಗಿದ್ದಾರೆ. ಏಷ್ಯಾ ಕಪ್ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ವೇಗಿಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ. ದೀಪಕ್ ಚಾಹರ್ ಅವರನ್ನು ಮೀಸಲು ಆಟಗಾರನಾಗಿ ಹೆಸರಿಸಲಾಗಿದೆ.
ಶಾಹೀನ್ ಅಫ್ರಿದಿ ಕೂಡ ಅಲಭ್ಯ: ಇನ್ನು ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಅಫ್ರಿದಿ ಕೂಡ ಈ ಟೂರ್ನಿಗೆ ಅಲಭ್ಯವಾಗಿದ್ದಾರೆ. ಶಾಹಿನ್ ಅಫ್ರಿದಿ ಕೂಡ ಗಾಯದಿಂದ ಬಳಲುತ್ತಿದ್ದು ಏಷ್ಯಾಕಪ್ನಿಂದ ಅನಿವಾರ್ಯವಾಗಿ ಹೊರಗುಳಿದಿದ್ದಾರೆ. ಹಾಗಾಗಿ ಬದಲಿ ಆಟಗಾರನನ್ನು ಪಾಕಿಸ್ತಾನ ತಂಡ ಹೆಸರಿಸಿದೆ.
ಶ್ರೀಲಂಕಾ ಸ್ಕ್ವಾಡ್ ಹೀಗಿದೆ: ದಾಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾತುಮ್ ನಿಸ್ಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ (ಉಪ ನಾಯಕ), ಭಾನುಕ ರಾಜಪಕ್ಸೆ (ವಿಕೆಟ್ ಕೀಪರ್), ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವ್ಕ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮಥೀಶ ಪತಿರಣ, ನುವಾನಿಡು ಫೆರ್ನಾಂಡೋ, ನುವಾನ್ ತುಷಾರ, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್)