
ಏಳು ಬಾರಿಯ ಚಾಂಪಿಯನ್ ಭಾರತವು ಮಂಗಳವಾರ ಏಷ್ಯಾ ಕಪ್ನ ಸೂಪರ್ 4 ಹಂತದ ತನ್ನ ಎರಡನೇ ಪಂದ್ಯದಲ್ಲಿ ಐದು ಬಾರಿ ಪ್ರಶಸ್ತಿ ವಿಜೇತ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ಗೆ ಇಳಿಯಲಿದೆ.
ಮಂಗಳವಾರ ದುಬೈನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯವು ರೋಹಿತ್ ಶರ್ಮಾ ಮತ್ತು ತಂಡಕ್ಕೆ ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಏಕೆಂದರೆ ಭಾರತ ಈಗಾಗಲೇ ತಮ್ಮ ಆರಂಭಿಕ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೋತಿದ್ದಾರೆ.
ಮುಂದಿನ ಒಂದು ಸೋಲು ಭಾರತವನ್ನು ಹೆಚ್ಚು ಕಡಿಮೆ ಪಂದ್ಯಾವಳಿಯಿಂದ ಹೊರಹಾಕುತ್ತದೆ. ಭಾರತ ಫೈನಲ್ ಪಂದ್ಯದ ಸ್ಥಾನಕ್ಕಾಗಿ ಸಾಕಷ್ಟು ಸ್ಥಾನಪಲ್ಲಟನೆಗಳು ಮತ್ತು ಸಂಯೋಜನೆಗಳನ್ನು ಅವಲಂಬಿಸಬೇಕಾಗುತ್ತದೆ. ಮತ್ತೊಂದೆಡೆ, ಕಳೆದ ವಾರ ಅಫ್ಘಾನಿಸ್ತಾನ ವಿರುದ್ಧ ನಾಲ್ಕು ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದ ನಂತರ ಶ್ರೀಲಂಕಾ ಹೆಚ್ಚಿನ ವಿಶ್ವಾಸದಿಂದ ಬೀಗುತ್ತಿದೆ.

ಮಂಗಳವಾರದ ಪಂದ್ಯವು ಶ್ರೀಲಂಕಾಕ್ಕೆ ದೊಡ್ಡ ಆಟವಾಗಿದೆ ಮತ್ತು ಸೂಪರ್ 4ರ ಲಂಕಾದ ಕೊನೆಯ ಪಂದ್ಯವು ಮತ್ತೊಂದು ಕಠಿಣ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಏಷ್ಯಾ ಕಪ್ ಈ ಪ್ರಮುಖ ಮುಖಾಮುಖಿಯಲ್ಲಿನ ಗೆಲುವು ರೋಹಿತ್ ಶರ್ಮಾ ಬಳಗವನ್ನು ಫೈನಲ್ ಸ್ಪರ್ಧೆಯಲ್ಲಿ ಜೀವಂತವಾಗಿರಿಸುತ್ತದೆ. ಒಂದು ವೇಳೆ ಸೋತರೆ ಹೆಚ್ಚು ಕಡಿಮೆ ತಂಡವನ್ನು ಸ್ಪರ್ಧೆಯಿಂದ ಹೊರಹೋದಂತಾಗುತ್ತದೆ.
ಅಫ್ಘಾನಿಸ್ತಾನ ವಿರುದ್ಧ ಆಡಿದ ಹನ್ನೊಂದರ ಬಳಗವನ್ನೇ ಶ್ರೀಲಂಕಾ ತಂಡ ಕಣಕ್ಕಿಳಿಸುತ್ತಿದ್ದು, ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆಯಾಗಿದೆ. ಕಳೆದ ಪಂದ್ಯದಲ್ಲಿದ್ದ ರವಿ ಬಿಷ್ಣೋಯ್ ಬದಲಿಗೆ ಅನುಭವಿ ರವಿಚಂದ್ರನ್ ಅಶ್ವಿನ್ಗೆ ಅವಕಾಶ ಕಲ್ಪಿಸಲಾಗಿದೆ.
ಭಾರತದ ಆಡುವ ಹನ್ನೊಂದರ ಬಳಗ
ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್
ಶ್ರೀಲಂಕಾದ ಆಡುವ ಹನ್ನೊಂದರ ಬಳಗ
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ದಸುನ್ ಶನಕ (ನಾಯಕ), ಭಾನುಕಾ ರಾಜಪಕ್ಸೆ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ.