
ಇಂದು (ಸೆಪ್ಟೆಂಬರ್ 6) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೂಪರ್ 4 ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿದ್ದು, ಎದುರಾಳಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 174 ರನ್ಗಳ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದರು. ಆದರೆ ತಂಡದ ಮೊತ್ತ 11 ರನ್ಗಳಾಗಿದ್ದಾಗ 6 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ಎಲ್ಬಿ ಬಲೆಗೆ ಬಿದ್ದರು. ನಂತರ ಬಂದ ವಿರಾಟ್ ಕೊಹ್ಲಿ ಯಾವುದೇ ರನ್ ಗಳಿಸಲು ವಿಫಲವಾಗಿ ಡಗ್ ಔಟ್ ಆದರು.

ಈ ವೇಳೆ ಭಾರತ 13 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 70 ರನ್ ಕಲೆಹಾಕಿ ಭಾರತದ ಇನ್ನಿಂಗ್ಸ್ ಕಟ್ಟಿದರು. ಸೂರ್ಯಕುಮಾರ್ ಯಾದವ್ ಜೊತೆ ಸೇರಿ 97 ರನ್ಗಳ ಜೊತೆಯಾಟ ನೀಡಿದರು. ನಂತರ ದೊಡ್ಡ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟಾದರು.
ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ 34 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ವಿಕೆಟ್ ಒಪ್ಪಿಸಿದರೆ, ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿ ವಿಕೆಟ್ ನೀಡಿದರು. ಅದೇ ರೀತಿ ರಿಷಭ್ ಪಂತ್ ಕೂಡಾ ಕೊನೆಯಲ್ಲಿ ಅಬ್ಬರಿಸಲು ಯತ್ನಿಸಿದರೂ 17 ರನ್ ಗಳಿಸಿದ್ದಾಗ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಹೊರನಡೆದರು.
ಇನ್ನು ದೀಪಕ್ ಹೂಡಾ ಈ ಪಂದ್ಯದಲ್ಲೂ ಮಿಂಚಲು ವಿಫಲರಾಗಿ 3 ರನ್ ಗಳಿಸಿ ಔಟಾದರುಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ 15 ರನ್ ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಇನ್ನು ಬೌಲಿಂಗ್ನಲ್ಲಿ ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 4 ಓವರ್ಗಳಲ್ಲಿ 24 ರನ್ ನೀಡಿ ಪ್ರಮುಖ 3 ವಿಕೆಟ್ ಗಳಿಸಿದರು. ಚಮಿಕಾ ಕರುಣಾರತ್ನೆ 4 ಓವರ್ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ನಾಯಕ ದಸುನ್ ಶನಕ 2 ಓವರ್ಗಳಲ್ಲಿ 26 ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದುಕೊಂಡರು.